ಕಾಸರಗೋಡು, ನ.12: ಅದು 18 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ. 13 ವರ್ಷದ ಬಾಲಕಿ ನಾಪತ್ತೆಯಾಗಿದ್ದಾಳೆಂದು ತಿಳಿದಿದ್ದ ಪ್ರಕರಣ ಕೊಲೆಯೆಂದು ಸಾಬೀತಾಗಿತ್ತು. ಅಷ್ಟೇ ಅಲ್ಲ, ಆರೋಪಿ ಯಾರೆಂದು ಪತ್ತೆ ಮಾಡಿ ಗಲ್ಲು ಶಿಕ್ಷೆಯನ್ನೂ ವಿಧಿಸಲಾಗಿತ್ತು. ಆದರೆ, ಬಾಲಕಿಯ ಅಸ್ಥಿಪಂಜರವನ್ನು ಕಾಸರಗೋಡಿನ ನ್ಯಾಯಾಲಯದಲ್ಲಿ 18 ವರ್ಷಗಳಿಂದ ಜೋಪಾನ ಮಾಡಲಾಗಿತ್ತು. ಸುದೀರ್ಘ ವರ್ಷಗಳ ಬಳಿಕ ಅಸ್ಥಿಪಂಜರ ಆಕೆಯ ಕುಟುಂಬದ ಕೈಸೇರಿದ್ದು, ಕಡೆಗೂ ಅಂತ್ಯಸಂಸ್ಕಾರದ ಮೋಕ್ಷ ಸಿಕ್ಕಂತಾಗಿದೆ. 

ಕೊಡಗಿನ ಅಯ್ಯಂಗೇರಿಯ ಸಫಿಯಾ ಎನ್ನುವ ಬಾಲಕಿಯ ಕೊಲೆ ಪ್ರಕರಣ 2006ರಲ್ಲಿ ಭಾರೀ ಸದ್ದು ಮಾಡಿತ್ತು. ಅಯ್ಯಂಗೇರಿ ಮೂಲದ 13 ವರ್ಷದ ಬಾಲಕಿಯನ್ನು ಕಾಸರಗೋಡಿನ ಮಾಸ್ತಿಕುಂಡು ನಿವಾಸಿ ಸಿವಿಲ್ ಕಂಟ್ರಾಕ್ಟರ್ ಕೆ.ಸಿ ಹಂಝ ಮತ್ತು ಮೈಮೂನಾ ದಂಪತಿ ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದರು. ಉದ್ಯೋಗ ನಿಮಿತ್ತ ದಂಪತಿ ಗೋವಾಕ್ಕೆ ತೆರಳಿದ್ದು, ಈ ವೇಳೆ ಸಫಿಯಾಳನ್ನೂ ಕರೆದೊಯ್ದಿದ್ದರು. ಕೆಲವು ತಿಂಗಳ ಬಳಿಕ ಮೊಯ್ದು ಕರೆ ಮಾಡಿದಾಗ, ಬಾಲಕಿಯನ್ನು ಕರೆತರುತ್ತೇನೆ ಎಂದು ಹಂಝ ಹೇಳಿದ್ದ. ಅದರಂತೆ, ಮಗಳಿಗೆ ಇಷ್ಟವಾಗಿದ್ದ ನೆಲ್ಲಿಕಾಯಿಯನ್ನು ಹಿಡಿದು ಮೊಯ್ದು ಕೊಡಗಿನಿಂದ ಕಾಸರಗೋಡಿಗೆ ತೆರಳಿದ್ದರು.

ಕಾಸರಗೋಡಿಗೆ ಬಂದಿದ್ದ ಹಂಝ, ತನ್ನ ಜೊತೆಗೆ ಬಂದಿದ್ದ ಸಫಿಯಾ ಇಲ್ಲಿಯೇ ಎಲ್ಲೋ ದಿಢೀರ್ ಕಾಣೆಯಾಗಿದ್ದಾಳೆ ಎಂದು ಕತೆ ಕಟ್ಟಿದ್ದ. ಇದೇ ನೆಪದಲ್ಲಿ ಮೊಯ್ದು ಮತ್ತು ಹಂಝ ಸೇರಿಕೊಂಡು ಕಾಸರಗೋಡಿನ ಪೊಲೀಸ್ ಠಾಣೆಯಲ್ಲಿ ಸಫಿಯಾ ನಾಪತ್ತೆ ಬಗ್ಗೆ ದೂರು ದಾಖಲಿಸಿದ್ದರು. ಪೊಲೀಸರು ಹುಡುಕಾಟ, ತನಿಖೆ ನಡೆಸಿದರೂ, ಸಫಿಯಾ ಕುರುಹು ಸಿಗಲಿಲ್ಲ. ಒಂದು ವರ್ಷದ ಬಳಿಕ ಸಫಿಯಾ ಪತ್ತೆಗಾಗಿ ಕ್ರಿಯಾ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ನಡುವೆ, ಬಾಲಕಿ ತಾಯಿ ತನ್ನ ಮಗಳಿಗೆ ನ್ಯಾಯ ದೊರಕಿಸಬೇಕೆಂದು ಕಾಸರಗೋಡಿನಲ್ಲಿ ನಿರಂತರ 90 ದಿನಗಳ ಕಾಲ ಪ್ರತಿಭಟನೆ ಕುಳಿತಿದ್ದರು.

ಇದರಿಂದ ಎಚ್ಚೆತ್ತ ರಾಜ್ಯ ಸರಕಾರ ಸಫಿಯಾ ನಾಪತ್ತೆ ಪ್ರಕರಣವನ್ನು ಸ್ಪೆಷಲ್ ಕ್ರೈಂ ಬ್ರಾಂಚ್ ತನಿಖೆಗೆ ವಹಿಸಿತ್ತು. ಅಪರಾಧ ವಿಭಾಗದ ಪೊಲೀಸರು ಘಟನೆಯ ಆರಂಭದಿಂದಲೇ ತನಿಖೆ ಆರಂಭಿಸಿದ್ದಲ್ಲದೆ, ಗೋವಾಕ್ಕೂ ಒಂದು ತಂಡವನ್ನು ಕಳಿಸಿಕೊಟ್ಟಿದ್ದರು. ಕೆಸಿ ಹಂಝ ಮತ್ತು ಅವರ ಪತ್ನಿಯನ್ನೂ ವಿಚಾರಣೆಗೆ ಒಳಪಡಿಸಿದರು. ಈ ವೇಳೆ, ಮುಚ್ಚಿ ಹೋಗಿದ್ದ ನೈಜಾಂಶ ಬಯಲಿಗೆ ಬಂದಿತ್ತು. ಗೋವಾದ ಮನೆಯಲ್ಲಿದ್ದಾಗ, ಬಿಸಿ ನೀರು ಸಫಿಯಾಳ ಮೈಗೆ ಬಿದ್ದು ತೀವ್ರ ಸುಟ್ಟ ಗಾಯಗಳಾಗಿದ್ದವು. ಇದರಿಂದ ಚಿಂತೆಗೀಡಾಗಿದ್ದ ಹಂಝ, ಮನೆ ಕೆಲಸದಾಳಿಗೆ ಹಿಂಸೆ ನೀಡಲಾಗಿದೆಯೆಂದು ತನ್ನ ಮೇಲೆ ಕೇಸು ಬೀಳುವ ಭಯದಲ್ಲಿ ಆಕೆಯನ್ನು ತನ್ನ ಮನೆಯಲ್ಲೇ ಕೊಲೆ ಮಾಡಿದ್ದ. ಅಲ್ಲದೆ, ಆಕೆಯ ದೇಹವನ್ನು ಕತ್ತರಿಸಿ ಗೋವಾದ ಅಣೆಕಟ್ಟು ಒಂದರ ಬಳಿಗೊಯ್ದು ಹೂತು ಹಾಕಿದ್ದ.

ಪೊಲೀಸ್ ವಿಚಾರಣೆಯಲ್ಲಿ ಕೊಲೆ ಪ್ರಕರಣ ಬಯಲಾಗಿದ್ದಲ್ಲದೆ, ಆರೋಪಿ ಹಂಝನನ್ನು ಬಂಧಿಸಿದ್ದರು. ಹೂತು ಹಾಕಿದ್ದ ಸ್ಥಳದಿಂದಲೇ ಆಕೆಯ ತಲೆಬುರುಡೆ ಮತ್ತು ಎಲುಬಿನ ತುಂಡುಗಳನ್ನು ಸಂಗ್ರಹಿಸಿ ಕಾಸರಗೋಡಿಗೆ ತಂದಿದ್ದರು. ಕೊಲೆಯಾದ ಎರಡು ವರ್ಷಗಳ ಬಳಿಕ, 2008 ಜೂನ್ 5ರಂದು ಆರೋಪಿ ಹಂಝನನ್ನು ಬಂಧಿಸಲಾಗಿತ್ತು. ಬಾಲಕಿಯ ಸಾವಿಗೆ ಸಾಕ್ಷ್ಯ ರೂಪದಲ್ಲಿ ಪೊಲೀಸರು ತಲೆಬುರುಡೆ ಮತ್ತು ಎಲುಬಿನ ತುಂಡುಗಳನ್ನು ಸಂಗ್ರಹಿಸಿ, ಕಾಸರಗೋಡಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಇರಿಸಿದ್ದರು. 2015ರಲ್ಲಿ ಕಾಸರಗೋಡಿನ ಜಿಲ್ಲಾ ನ್ಯಾಯಾಲಯ ಬಾಲಕಿಯನ್ನು ಕ್ರೂರ ರೀತಿಯಲ್ಲಿ ಕೊಲೆ ಮಾಡಿದ್ದಕ್ಕಾಗಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಆನಂತರ, ಆರೋಪಿ ಹಂಝ ಮೇಲ್ಮನವಿ ಹೋಗಿದ್ದರಿಂದ 2019ರಲ್ಲಿ ಕೇರಳ ಹೈಕೋರ್ಟ್ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತ್ತು.

ಪ್ರಕರಣ ಕೋರ್ಟಿನಲ್ಲಿ ಇತ್ಯರ್ಥಗೊಂಡಿದ್ದರೂ, ಬಾಲಕಿಯ ತಲೆಬುರುಡೆಯನ್ನು ಕುಟುಂಬಸ್ಥರು ಕೋರ್ಟಿನಿಂದ ಪಡೆದಿರಲಿಲ್ಲ. ಇದೀಗ ಪಬ್ಲಿಕ್ ಪ್ರಾಸಿಕ್ಯೂಟರ್ ಮೂಲಕ ಪೋಷಕರು ಅರ್ಜಿ ಸಲ್ಲಿಸಿ, ಇಸ್ಲಾಂ ಸಂಪ್ರದಾಯದಂತೆ ದಫನ ಮಾಡಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದರು. ಅರ್ಜಿ ಪರಿಗಣಿಸಿದ ಜಿಲ್ಲಾ ನ್ಯಾಯಾಧೀಶ ಸಾನು ಎಸ್. ಪಣಿಕ್ಕರ್, ತಲೆಬುರುಡೆ ಮತ್ತು ಅಸ್ಥಿಗಳನ್ನು ಕುಟುಂಬಕ್ಕೆ ಬಿಟ್ಟು ಕೊಟ್ಟಿದ್ದಾರೆ. ಇದೇ ನ.11ರಂದು ಕಾಸರಗೋಡಿನ ಕೋರ್ಟಿನಿಂದ ಎಲುಬಿನ ತುಂಡುಗಳನ್ನು ಪಡೆದ ಕುಟುಂಬ ಕೊಡಗಿನ ಅಯ್ಯಂಗೇರಿಗೆ ಒಯ್ದು ಅಲ್ಲಿನ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ದಫನ ಕಾರ್ಯ ನೆರವೇರಿಸಿದೆ. ಆಮೂಲಕ 18 ವರ್ಷಗಳ ಹಿಂದೆ ಕೊಲೆಯಾದ ಬಾಲಕಿ ಸಫಿಯಾಳಿಗೆ ಕೊನೆಗೂ ಮೋಕ್ಷ ಸಿಕ್ಕಂತಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!