
ಹಾವೇರಿ : ಶಿಗ್ಗಾಂವಿ ಉಪಚುನಾವಣೆ ಮುಗಿದು ಒಂದು ದಿನ ಕಳೆದಿಲ್ಲ, ಅಷ್ಟರಲ್ಲೇ ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದ ಖಾಲಿ ಸೈಟ್ನ ಕಾಲುವೆಯಲ್ಲಿ 10 ಬ್ಯಾಲೆಟ್ ಬಾಕ್ಸ್ಗಳು ಪತ್ತೆಯಾಗಿದ್ದು, ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಶಿಗ್ಗಾಂವಿ ಉಪಚುನಾವಣೆಯ ಮತದಾನ ಪ್ರಕ್ರಿಯೆ ನಿನ್ನೆಯಷ್ಟೇ ಮುಗಿದಿದ್ದು, ಮರುದಿನವೇ ಯತ್ತಿನಹಳ್ಳಿ ಗ್ರಾಮದ ಕಾಲುವೆಯಲ್ಲಿ ಬ್ಯಾಲೆಟ್ ಬಾಕ್ಸ್ಗಳು ಸಿಕ್ಕಿದ್ದು, ಹಲವಾರು ಅನುಮಾನಕ್ಕೆ ಕಾರಣವಾಗಿದೆ.
ಇನ್ನು ಈ ಬಗ್ಗೆ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸುದ್ದಿ ಗೋಷ್ಠಿಯನ್ನು ನಡೆಸಿದ್ದು, ಯತ್ತಿನಗಳ್ಳಿ ಗ್ರಾಮದ ಬಳಿ ನಿರುಪಯುಕ್ತ ಬ್ಯಾಲೆಟ್ ಬಾಕ್ಸ್ ಪತ್ತೆಯಾಗಿದ್ದು, ಬಳಕೆಯಲ್ಲಿ ಇಲ್ಲದ ಬ್ಯಾಲೆಟ್ ಬಾಕ್ಸ್ ಗಳನ್ನು ಎಪಿಎಂಸಿ ಗೋದಾಮಿನಲ್ಲಿ ಇರಿಸಲಾಗಿತ್ತು. ಈ ಬಾಕ್ಸ್ ಗಳು ಬಳಕೆಯಲ್ಲಿ ಇರಲಿಲ್ಲ. ಶಿಗ್ಗಾವಿ ಉಪಚುನಾವಣೆಗೂ ಈ ಬಾಕ್ಸ್ ಗಳಿಗೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಹಾವೇರಿ ನಗರದ ಎಪಿಎಂಸಿಯಲ್ಲಿ ಇರುವ ಒಂದು ಹಳೆ ಗೋದಾಮಿನಲ್ಲಿ ಹಳೆಯ ನಿರುಪಯುಕ್ತ ಬ್ಯಾಲೆಟ್ ಬಾಕ್ಸ್ ಗಳನ್ನು ಇಡಲಾಗಿತ್ತು. ಇದನ್ನು ಕಂದಾಯ ಇಲಾಖೆಯವರು ಹಲವು ವರ್ಷಗಳ ಹಿಂದೆ ತಂದಿಟ್ಟಿದ್ದರು ಎನ್ನಲಾಗಿದೆ.
ಆದರೆ ಕಿಡಿಗೇಡಿಗಳು ಬಾಕ್ಸ್ಗಳನ್ನು ಮಾರುವ ಉದ್ದೇಶದಿಂದ ಕಳ್ಳತನ ಮಾಡಿದ್ದಾರೆ. ಆದರೆ, ಸಾಗಿಸಲು ಸಾಧ್ಯವಾಗದೇ, ಕಿಡಿಗೇಡಿಗಳು ನ ಕಾಲುವೆಯಲ್ಲಿ ಬಿಸಾಕಿ ಹೋಗಿದ್ದಾರೆ ಎಂದು ಹೇಳಿದರು.
ಸದ್ಯ 10 ಬ್ಯಾಲೆಟ್ ಬಾಕ್ಸ್ಗಳು ಕಾಲುವೆಯಲ್ಲಿ ಪತ್ತೆಯಾಗಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದ್ದು, ಸ್ಥಳಕ್ಕೆ ಹಾವೇರಿ ತಹಶೀಲ್ದಾರ್ ಶರಣಮ್ಮ ಹಾಗೂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.






