
ಪವಿತ್ರ ಮೆಕ್ಕಾ ಮದೀನಾ ಯಾತ್ರೆಗೆ ದಕ್ಷಿಣಕನ್ನಡ ಜಿಲ್ಲೆಯ ಯಾತಾರ್ಥಿಗಳನ್ನು ಕರೆದೊಯ್ದಿದ್ದ ಟ್ರಾವೆಲ್ ಏಜೆನ್ಸಿ ಅವರನ್ನು ಮದೀನಾದಲ್ಲಿ ಕೈಬಿಟ್ಟ ಘಟನೆ ನಡೆದಿದ್ದು, ಇದೀಗ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ, ತಮ್ಮ ಸ್ನೇಹಿತರ ಸಹಾಯದಿಂದ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತಂದಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮೊಹಿಯುದ್ದಿನ್ ಬಾವಾ ಕಬಕದ ಮೊಹಮ್ಮದಿಯ ಟ್ರಾವೆಲ್ ಏಜೆನ್ಸಿ 17 ದಿನಗಳ ಹಿಂದೆ 172 ವ್ಯಕ್ತಿಗಳನ್ನು ಉಮ್ರಾ ಯಾತ್ರೆಗೆ ಕರೆದೊಯ್ದಿತ್ತು. ಮೊದಲಿಗೆ ಮೆಕ್ಕಾ ನಗರಕ್ಕೆ ಬಳಿಕ ಮದೀನಾ ನಗರಕ್ಕೆ ಯಾತ್ರಿಕರನ್ನು ಕರೆದೊಯ್ಯಲಾಗಿದೆ. ಬಳಿಕ ಏಜೆನ್ಸಿಯ ವ್ಯಕ್ತಿ ಯಾತ್ರಿಕರನ್ನು ಅಲ್ಲಿಯೇ ಬಿಟ್ಟು ಭಾರತಕ್ಕೆ ಮರಳಿದ್ದಾರೆ. ಇದರಿಂದಾಗಿ ದಿಕ್ಕು ತೋಚದಂತಾದ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದರು, ಅದರಲ್ಲಿ ನೂರಕ್ಕೂ ಹೆಚ್ಚು ಯಾತ್ರಿಕರು ತಮ್ಮ ಸಂಬಂಧಿಕರ ಸಹಾಯದಿಂದ ಹಣ ಸಂಗ್ರಹಿಸಿ ಭಾರತಕ್ಕೆ ಮರಳಿದ್ದಾರೆ. ಆದರೆ ಮಹಿಳೆಯರು, ವೃದ್ಧರು ಸೇರಿದಂತೆ 58 ಜನರು ಯಾವುದೇ ಸಹಾಯವಿಲ್ಲದೆ ಕಂಗಾಲಾಗಿದ್ದರು. ಆಹಾರ, ಔಷಧ, ವಸತಿ ಇಲ್ಲದೇ ದಿನನಿತ್ಯದ ಜೀವನ ಸಾಗಿಸಲು ಪರದಾಡುತ್ತಿದ್ದರು.
ಈ ಪರಿಸ್ಥಿತಿಯ ಬಗ್ಗೆ ತಿಳಿದ ಮೊಹಿಯುದ್ದೀನ್ ಬಾವಾ ಕೂಡಲೇ ಸೌದಿ ಅರೇಬಿಯಾದಲ್ಲಿರುವ ತಮ್ಮ ಸ್ನೇಹಿತರು ಮತ್ತು ವಿವಿಧ ಸಂಸ್ಥೆಗಳನ್ನು ಸಂಪರ್ಕಿಸಿದ್ದು, ಪ್ರಯಾಣ ವೆಚ್ಚಕ್ಕಾಗಿ ಹಣ ಸಂಗ್ರಹಿಸಿದ್ದಾರೆ. ಬಳಿಕ ಮಂಗಳೂರು, ಕಣ್ಣೂರು, ಕ್ಯಾಲಿಕಟ್ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳ ಮೂಲಕ ಅವರೆಲ್ಲರೂ ತಮ್ಮ ಮನೆಗೆ ವಾಪಸ್ಸಾಗಿದ್ದಾರೆ.
ಸಾರ್ವಜನಿಕರನ್ನು ವಂಚಿಸುವ ವಂಚಕ ಟ್ರಾವೆಲ್ ಏಜೆನ್ಸಿಗಳು, ವಿಶೇಷವಾಗಿ ತಮ್ಮ ಗ್ರಾಹಕರಿಗೆ ಕೇವಲ ಡಮ್ಮಿ ರಿಟರ್ನ್ ಟಿಕೆಟ್ ಒದಗಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಏಜೆನ್ಸಿಗಳ ಪರವಾನಿಗೆಯನ್ನು ರದ್ದುಪಡಿಸಬೇಕು, ವಂಚನೆಗೆ ಅನುಕೂಲ ಮಾಡಿಕೊಡುವ ಅಧಿಕಾರಿಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಬಾವಾ ಒತ್ತಾಯಿಸಿದ್ದಾರೆ.






