
ನನ್ನ ತಾಯಿ ಸೇರಿದಂತೆ ಆರು ಮಂದಿಯನ್ನು ಹತ್ಯೆಗೈದಿದ್ದೇನೆ ಎಂದು ಯುವಕನೊಬ್ಬ ವೆಂಜಾರಮೂಡು ಠಾಣೆ ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ. ಆದರೆ, ಈ ಸಾವುಗಳು ಹಾಗೂ ಈ ಕೃತ್ಯದ ಹಿಂದಿನ ಉದ್ದೇಶವನ್ನು ಪೊಲೀಸರಿನ್ನೂ ದೃಢಪಡಿಸಬೇಕಿದೆ ಎಂದು Manorama News ವರದಿ ಮಾಡಿದೆ.
ಈವರೆಗೆ ಐವರು ಮೃತಪಟ್ಟಿರುವುದು ದೃಢಪಟ್ಟಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ಆರೋಪಿಯನ್ನು ಪೆರುಮಳದ ನಿವಾಸಿ ಅಫನ್ (23) ಎಂದು ಗುರುತಿಸಲಾಗಿದೆ. ನಾನು ನನ್ನ ತಾಯಿ, ಸಹೋದರ, ಚಿಕ್ಕಪ್ಪ, ಗೆಳತಿ ಹಾಗೂ ಇತರ ಇಬ್ಬರನ್ನು ಮೂರು ವಿವಿಧ ನಿವಾಸಗಳಲ್ಲಿ ಹತ್ಯೆಗೈದಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ.
ಮೊದಲಿಗೆ ಆತ ಸೋಮವಾರ ಮುಂಜಾನೆ ಸಂಜೆ ಸುಮಾರು 5.30ರ ವೇಳೆಗೆ ಪಂಗೋಡೆಯಲ್ಲಿ ವಾಸಿಸುತ್ತಿದ್ದ ತನ್ನ ಅಜ್ಜಿ ಸಲ್ಮಾ ಬೀವಿ (88) ಅನ್ನು ಆಕೆಯ ನಿವಾಸದಲ್ಲಿ ಕೊಚ್ಚಿ ಹತ್ಯೆಗೈದಿದ್ದಾನೆ. ನಂತರ ಎಸ್.ಎನ್.ಪುರಂನಲ್ಲಿ ವಾಸಿಸುತ್ತಿದ್ದ ತನ್ನ ಚಿಕ್ಕಪ್ಪನ ನಿವಾಸಕ್ಕೆ ತೆರಳಿರುವ ಆತ, ತನ್ನ ಚಿಕ್ಕಪ್ಪ ಲತೀಫ್ ಹಾಗೂ ಚಿಕ್ಕಮ್ಮ ಶಹೀದಾರನ್ನು ಕೊಚ್ಚಿ ಕೊಂದಿದ್ದಾನೆ. ಕೊನೆಗೆ ಪೆರುಮಳದಲ್ಲಿರುವ ತನ್ನ ನಿವಾಸಕ್ಕೆ ಮರಳಿರುವ ಆತ, 9ನೇ ತರಗತಿ ವಿದ್ಯಾರ್ಥಿಯಾದ ತನ್ನ ಕಿರಿಯ ಸಹೋದರ ಅಫ್ಸಾನ್ (14), ತಾಯಿ ಶೆಮಿ ಹಾಗೂ ಗೆಳತಿ ಫರ್ಸಾನಾ ಮೇಲೆ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಈ ಆರು ಮಂದಿಯ ಪೈಕಿ, ಐದು ಮಂದಿ ಮೃತಪಟ್ಟಿದ್ದು,ಆತ ಈ ಅಪರಾಧ ಕೃತ್ಯವನ್ನು ಕೇವಲ ಎರಡು ಗಂಟೆಗಳೊಳಗೆ ನಡೆಸಿದ್ದಾನೆ ಎಂದು ವರದಿಯಾಗಿದೆ.
ಅಫನ್ ರ ತಾಯಿ ಶೆಮಿ ಸದ್ಯ ಗೋಕುಲಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು Manorama News ವರದಿ ಮಾಡಿದೆ.
ಅಫ್ಸಾನ್ ಪೊಲೀಸ್ ಠಾಣೆಗೆ ತೆರಳುವುದಕ್ಕೂ ಮುನ್ನ ವಿಷ ಸೇವಿಸಿದ್ದ ಎಂದು ಹೇಳಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ ಆತನ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದ್ದಂತೆಯೆ, ಪೊಲೀಸರು ಆತನನ್ನು ತಿರುವನಂತಪುರಂನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಫನ್ ಇತ್ತೀಚೆಗಷ್ಟೆ ತನ್ನ ಮನೆಗೆ ತನ್ನ ಗೆಳತಿಯನ್ನು ಕರೆ ತಂದಿದ್ದ. ಆತ ಯುಎಇಯಲ್ಲಿ ತನ್ನ ತಂದೆಯ ಪೀಠೋಪಕರಣ ವ್ಯವಹಾರದಲ್ಲಿ ನೆರವು ನೀಡುತ್ತಿದ್ದ. ಆದರೆ, ಆತನ ತಂದೆ ಹಣಕಾಸು ಬಿಕ್ಕಟ್ಟಿಗೆ ತುತ್ತಾಗಿದ್ದರಿಂದ, ಆತ ಮನೆಗೆ ಮರಳಿದ್ದ ಎಂದು ಪಂಚಾಯತಿ ಸದಸ್ಯ ಶಾಜಿ ತಿಳಿಸಿದ್ದಾರೆ. ಅಫನ್ ತನ್ನ ಅಜ್ಜಿಯ ಒಡವೆಗಳಿಗಾಗಿ ಆಕೆಯನ್ನು ಕೋರಿದ್ದ ಎಂದು ಹೇಳಲಾಗಿದೆ. ನನ್ನ ಸಂಬಂಧಿಕರು ನನಗೆ ಹಣಕಾಸು ನೆರವು ನೀಡಲು ನಿರಾಕರಿಸಿದ್ದರಿಂದ, ನಾನು ಅವರನ್ನೆಲ್ಲ ಸಾಮೂಹಿಕ ಹತ್ಯೆಗೈದೆ ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಅಫನ್ ತಪ್ಪೊಪ್ಪಿಕೊಂಡಿದ್ದಾನೆ.
