
ಉಳ್ಳಾಲ ತಾಲ್ಲೂಕಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆಯಲ್ಲಿ ಜ.17 ರಂದು ನಡೆದ ದರೋಡೆ ಪ್ರಕರಣದ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಬ್ಬರು ಸ್ಥಳೀಯ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಕನ್ಯಾನದ ಭಾಸ್ಕರ್ ಬೆಳ್ಚಪಾಡ ಅಲಿಯಾಸ್ ಶಶಿ ಥೇವರ್ (69) ಹಾಗೂ ಉಳ್ಳಾಲ ತಾಲ್ಲೂಕಿನ ಕೆ.ಸಿ.ರೋಡ್ನ ಮಹಮ್ಮದ್ ನಜೀರ್ (65) ಬಂಧಿತರು.
ಪ್ರಕರಣದಲ್ಲಿ ಒಟ್ಟಾರೆ ಆರು ಜನರನ್ನು ಬಂಧಿಸಿದಂತಾಗಿದೆ.
‘ಮುಂಬೈನ ದರೋಡೆಕೋರರ ತಂಡಕ್ಕೆ ಈ ಬ್ಯಾಂಕಿನ ಬಗ್ಗೆ ಮಾಹಿತಿ ನೀಡಿದ್ದು ಮುಂಬೈನಲ್ಲಿ ಶಶಿ ತೇವರ್ ಹೆಸರಿನಲ್ಲಿ ತಲೆಮರೆಸಿಕೊಂಡಿದ್ದ ಭಾಸ್ಕರ್ ಬೆಲ್ಚಪಾಡ. ಆತ ಏಳು ವರ್ಷಗಳಿಂದ ಕೆ.ಸಿ.ರೋಡ್ನ ಮಹಮ್ಮದ್ ನಜೀರ್ ಸಂಪರ್ಕದಲ್ಲಿದ್ದ. ಈ ಬ್ಯಾಂಕ್ನ ದರೋಡೆಗೆ ಭಾಸ್ಕರ್ ಆರು ತಿಂಗಳಿಂದ ಸಂಚು ರೂಪಿಸಿದ್ದ. ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಆತನನ್ನು ಸೋಮವಾರ ಬಂಧಿಸಿದ್ದೇವೆ. ಆತ ನೀಡಿದ ಮಾಹಿತಿ ಆಧಾರದಲ್ಲಿ ಮಹಮ್ಮದ್ ನಜೀರ್ನನ್ನು ಮಂಗಳವಾರ ಬಂಧಿಸಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಬ್ಯಾಂಕಿನ ಚಟುವಟಿಕೆ ಬಗ್ಗೆ ಭಾಸ್ಕರ್ಗೆ ಮಹಮ್ಮದ್ ನಜೀರ್ ಸಂಪೂರ್ಣ ಮಾಹಿತಿ ನೀಡಿದ್ದ. ಸಂಘದ ಕಟ್ಟಡವನ್ನು ಆರೋಪಿಗಳಿಗೆ ತೋರಿಸಿದ್ದು ಮಹಮ್ಮದ್ ನಜೀರ್. ದರೋಡೆ ನಡೆಸುವ ದಿನವನ್ನು ಮತ್ತು ಸಮಯವನ್ನು ಗೊತ್ತುಪಡಿಸುವುದಕ್ಕೂ ಆತ ನೆರವಾಗಿದ್ದ. ಸಂಘದ ಕಚೇರಿಯಲ್ಲಿ ಎಷ್ಟು ಸಿಬ್ಬಂದಿ ಇದ್ದಾರೆ. ದರೋಡೆ ನಡೆಸಿದ ಬಳಿಕ ಯಾವ ಮಾರ್ಗದಲ್ಲಿ ತಪ್ಪಿಕೊಂಡು ಹೋಗಬಹುದು ಎಂಬ ಮಾಹಿತಿಗಳನ್ನೂ ದರೋಡೆಕೋರರ ತಂಡಕ್ಕೆ ಒದಗಿಸಿದ್ದ’ ಎಂದು ತಿಳಿಸಿದ್ದಾರೆ.
ಆರೋಪಿ ಭಾಸ್ಕರ್ 25 ವರ್ಷಗಳಿಂದ ಹುಟ್ಟೂರನ್ನು ತೊರೆದು ಮುಂಬೈನಲ್ಲಿ ವಾಸವಿದ್ದ. ಆತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಡಕಾಯಿತಿ, ಸುಲಿಗೆ, ಶಸ್ತ್ರಾಸ್ತ್ರ ಕಾಯ್ದೆಗಳ ಅಡಿ ನಾಲ್ಕು ಪ್ರಕರಣ ದಾಖಲಾಗಿವೆ. 2011ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ದರೋಡೆ ಯತ್ನ ಪ್ರಕರಣ, ಮುಂಬೈನ ಸಿಐಡಿ ಅಪರಾಧ ಠಾಣೆಯ ವ್ಯಾಪ್ತಿಯಲ್ಲಿ ಭಾರತ ಶಸ್ತ್ರಾಸ್ತ್ರ ಕಾಯ್ದೆಯಡಿ 2021ರಲ್ಲಿ ದಾಖಲಾಗಿದ್ದ ಪ್ರಕರಣ, ಕೊಣಾಜೆ ಠಾಣೆಯಲ್ಲಿ 2022ರಲ್ಲಿ ದಾಖಲಾಗಿದ್ದ ಸುಲಿಗೆ ಪ್ರಕರಣ ಹಾಗೂ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ 2022ರಲ್ಲಿ ದಾಖಲಾಗಿದ್ದ ದರೋಡೆಗೆ ಯತ್ನ ಪ್ರಕರಣಗಳಲ್ಲಿ ಆತ ಆರೋಪಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೆ.ಸಿ.ರೋಡ್ ದರೋಡೆ ಪ್ರಕರಣ ಸಂಬಂಧ ಪೊಲೀಸರು ತಮಿಳುನಾಡಿನ ಮುರುಗಂಡಿ ಥೇವರ್ (36), ಮುಂಬೈನ ಡೊಂಬಿವಿಲಿ ಪಶ್ಚಿಮದ ಗೋಪಿನಾಥ್ ಚೌಕ್ನ ಯೋಸುವ ರಾಜಂದ್ರನ್ (35), ಮುಂಬೈ ಚೆಂಬೂರು ತಿಲಕನಗರದ ಕಣ್ಣನ್ ಮಣಿ (36), ಮುರುಗಂಡಿಗೆ ಆಶ್ರಯ ನೀಡಿದ್ದ ಆತನ ತಂದೆ ಎಂ.ಷಣ್ಮುಗ ಸುಂದರಂನನ್ನು ಈ ಹಿಂದೆಯೇ ಬಂಧಿಸಿದ್ದರು. ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆಯಿಂದ ಒಟ್ಟು 18.674 ಕೆ.ಜಿ. ಚಿನ್ನಾಭರಣಗಳು ಹಾಗೂ ₹ 11.67 ಲಕ್ಷ ನಗದು ದರೋಡೆಯಾಗಿತ್ತು. ಆರೋಪಿಗಳಿಂದ ಒಟ್ಟು 18.314 ಕೆಜಿ ಚಿನ್ನ ಹಾಗೂ ₹3.80 ಲಕ್ಷ ನಗದನ್ನು ಪೊಲೀಸರು ವಶಪಡಿಸಿ ಕೊಂಡಿದ್ದರು.
ಉಳ್ಳಾಲ ಠಾಣೆಯ ಇನ್ಸ್ಪೆಕ್ಟರ್ ಟಿ.ಡಿ ನಾಗರಾಜ್ ನೇತೃತ್ವದಲ್ಲಿ ನಡೆದ ಆರೋಪಿಗಳ ಪತ್ತೆಕಾರ್ಯದಲ್ಲಿ ಪಿಎಸ್ಐ ಶೀತಲ್ ಆಲಗೂರ, ಸಂತೋಷ್ ಕುಮಾರ್ ಡಿ. ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
