
ಚಲಿಸುತ್ತಿದ್ದ ಲಾರಿಯಿಂದ ಜಿಗಿದ ಪರಿಣಾಮ ಕಾಂಕ್ರೀಟ್ ರಸ್ತೆಗೆ ಬಿದ್ದು ನಿರ್ವಾಹಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಫೆ. 25ರಂದು ಮುಂಜಾನೆ ನಡೆದಿದೆ.
ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯ ಎರುವೈಕಾಡು ಗ್ರಾಮದ ನಿವಾಸಿ ಲಕ್ಷ್ಮಣ್ ಸೇಗೊಂಟ್ಟವನ್ (43)ಮೃತಪಟ್ಟ ನಿರ್ವಾಹಕ.
ಈತ ತನ್ನೂರಿನವರೇ ಆದ ವೇಳಾಯುದಂ ರಾಜಾಗಂ ಅವರ ಜತೆ ಲಾರಿಯಲ್ಲಿ ನಿರ್ವಾಹಕನಾಗಿ ಕಳೆದ 1 ವಾರದಿಂದ ಕೆಲಸ ಮಾಡಿಕೊಂಡಿದ್ದ. ಅವರು ತಮಿಳುನಾಡಿನ ದಿಂಡಿವನಮ್ ಎಂಬಲ್ಲಿಂದ ಕಲ್ಲಂಗಡಿ ಹಣ್ಣುಗಳನ್ನು ಲೋಡ್ ಮಾಡಿಕೊಂಡು ಮಂಗಳೂರಿಗೆ ಬರುತ್ತಿದ್ದು, ಫೆ. 25ರಂದು ಮಧ್ಯರಾತ್ರಿ ಲಕ್ಷ್ಮಣ್ ಸೇಗೊಂಟ್ಟವನ್ ಬೀಡಿ ಸೇದಬೇಕೆಂದು ಹೇಳಿದಾಗ ಸ್ವಲ್ಪ ಮುಂದಕ್ಕೆ ತೆಗೆದುಕೊಂಡು ಹೋಗಿ ಲಾರಿ ನಿಲ್ಲಿಸುತ್ತೇನೆಂದು ಚಾಲಕ ವೇಳಾಯುದಂ ಹೇಳಿದ್ದರು. ಇದರಿಂದ ಉದ್ವೇಗಗೊಂಡ ಲಕ್ಷ್ಮಣ್ ಲಾರಿ ಅಡ್ಡಹೊಳೆ ಸೇತುವೆ ಬಳಿ ತಲುಪಿದಾಗ ಲಾರಿಯ ಎಡಬದಿ ಕಿಟಕಿಯ ಮೂಲಕ ಕಾಂಕ್ರೀಟ್ ರಸ್ತೆಗೆ ಜಿಗಿದಿದ್ದಾರೆ. ಬಳಿಕ ವೇಳಾಯುದಂ ಅವರು ಲಾರಿಯನ್ನು ನಿಲ್ಲಿಸಿ ಇಳಿದು ನೋಡಿದಾಗ ಲಕ್ಷ್ಮಣ್ ಎದೆಯ ಭಾಗದಲ್ಲಿ ತರಚಿದ ಗಾಯವುಂಟಾಗಿ ಮೃತಪಟ್ಟಿದ್ದರು. ಈ ಬಗ್ಗೆ ವೇಳಾಯುದಂ ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
