ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಭಾನುವಾರ ವಕ್ಫ್ ಕಾಯಿದೆಯನ್ನು ಜಾರಿಗೆ ತಂದ ನಂತರ, ಭಾರತೀಯ ಜನತಾ ಪಾರ್ಟಿ ಈಗ ಕ್ರೈಸ್ತರು, ಜೈನರು, ಬೌದ್ಧರು ಮತ್ತು ಹಿಂದೂ ದೇವಾಲಯಗಳ ಭೂಮಿಯನ್ನು ಗುರಿಯಾಗಿಸುತ್ತಿದೆ ಎಂದು ಆರೋಪಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖವಾಣಿಯಾದ ಆರ್ಗನೈಸರ್‌ನಲ್ಲಿನ ಲೇಖನವನ್ನು ಉಲ್ಲೇಖಿಸಿ ಎನ್‌ಸಿಪಿ (ಎಸ್‌ಪಿ) ನಾಯಕ ಜಿತೇಂದ್ರ ಅವಾದ್ ಕೂಡ ಇದೇ ರೀತಿಯ ಆರೋಪವನ್ನು ಮಾಡಿದರು.

45ನೇ ಸ್ಥಾಪನಾ ದಿನವನ್ನು ಆಚರಿಸುತ್ತಿರುವ ಬಿಜೆಪಿಗೆ ಶ್ರೀ ರಾಮನಂತೆ ವರ್ತಿಸಿ ಎಂದು ಠಾಕ್ರೆ ಸಲಹೆ ನೀಡಿದರು. “ವಕ್ಫ್ ಕಾಯಿದೆಯ ನಂತರದ ಮುಂದಿನ ಹೆಜ್ಜೆ ಕ್ರೈಸ್ತರು, ಜೈನರು, ಬೌದ್ಧರು ಮತ್ತು ಹಿಂದೂ ದೇವಾಲಯಗಳ ಭೂಮಿಯನ್ನು ಗುರಿಯಾಗಿಸುವುದು. ಅವರು ಪ್ರಮುಖ ಭೂಮಿಯನ್ನು ತಮ್ಮ ಸ್ನೇಹಿತರಿಗೆ ನೀಡುತ್ತಾರೆ. ಯಾವುದೇ ಸಮುದಾಯದ ಮೇಲೆ ಅವರಿಗೆ ಪ್ರೀತಿ ಇಲ್ಲ” ಎಂದು ಠಾಕ್ರೆ ಹೇಳಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ವಕ್ಫ್ (ತಿದ್ದುಪಡಿ) ಮಸೂದೆ 2025ಕ್ಕೆ ಒಪ್ಪಿಗೆ ನೀಡಿದರು. ಈ ಕಾನೂನು ದೇಶದಲ್ಲಿ ಮುಸ್ಲಿಂ ಧಾರ್ಮಿಕ ದತ್ತಿಗಳ ಸುಧಾರಣೆಗೆ ದಾರಿ ಮಾಡಿಕೊಡಲಿದೆ ಎಂದು ಸರ್ಕಾರ ಹೇಳಿದೆ. “ಅವರು ಇದನ್ನು ಸಾರ್ವಜನಿಕವಾಗಿ ಮಾಡಿದ್ದಾರೆ ಮತ್ತು ಎಲ್ಲರೂ ತಮ್ಮ ಕಣ್ಣು ತೆರೆಯಬೇಕು” ಎಂದು ಠಾಕ್ರೆ ಹೇಳಿದರು. ಆರ್ಗನೈಸರ್ ಲೇಖನವನ್ನು ಉಲ್ಲೇಖಿಸಿದ ಅವರು, ಆ ಲೇಖನವನ್ನು ಈಗ ಪ್ರಕಟಣೆಯಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದರು. ವಕ್ಫ್ ಮಸೂದೆ ವಿರುದ್ಧ ಇತರ ಪ್ರತಿಪಕ್ಷಗಳಂತೆ ಶಿವಸೇನೆ (ಯುಬಿಟಿ) ಕೂಡ ನ್ಯಾಯಾಲಯದ ಮೊರೆ ಹೋಗಲಿದಿಯೇ ಎಂದು ಕೇಳಿದಾಗ ಠಾಕ್ರೆ ಇಲ್ಲ ಎಂದು ಉತ್ತರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!