ಬಿಜೆಪಿಯ ಫೈಯರ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿದ್ದ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಇಂದು ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ನಡೆದರು. ರಾಮಚಂದರ್ ರಾವ್ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಹೈಕಮಾಂಡ್ ನೇಮಿಸುವ ಸುದ್ದಿ ಹೊರಬೀಳುತ್ತಿದ್ದಂತೆ ತೀವ್ರ ನಿರಾಶೆಗೊಂಡ ಅವರು ಈ ನಿರ್ಧಾರ ಪ್ರಕಟಿಸಿದರು.
ಇದರಿಂದ ಬಿಜೆಪಿ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮಾತನಾಡಿದ ಅವರು, ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿ ಎಂದು ನಾವು ಮತ್ತು ನಮ್ಮ ನಿಷ್ಠಾವಂತ ಕಾರ್ಯಕರ್ತರು ಸಾಕಷ್ಟು ಶ್ರಮಪಡುತ್ತಿದ್ದರೆ, ಬರಬಾರದು ಎಂತಲೇ ಕೆಲವರು ನಮ್ಮಲ್ಲೇ ಒಳಗೊಳಗೆ ಆಟವಾಡುತ್ತಿದ್ದಾರೆ. ಆದರೆ ನಮ್ಮನ್ನೇ ಪಕ್ಷವು ಕಡೆಗಣಿಸಿದ ಮೇಲೆ ನಾವು ಮತ್ತು ನಮ್ಮ ಬೆಂಬಲಿಗರು ಪಕ್ಷಕ್ಕಾಗಿ ಕಷ್ಟಪಡುವುದರಲ್ಲಿ ಯಾವ ಅರ್ಥವೂ ಇಲ್ಲ. ಹೀಗಾಗಿ ನಿಮ್ಮ ಪಕ್ಷಕ್ಕೆ, ನಿಮಗೂ ಒಂದು ದೊಡ್ಡ ಸಲಾಂ (ಅಯ್ಯಾ ಮೀ ಪಾರ್ಟಿಕಿ ದಂಡಂ, ಮೀಕೂ ದಂಡಂ) ಎಂದಿರುವ ರಾಜಾ ಸಿಂಗ್ ರಾಜೀನಾಮೆ ನೀಡಿರುವುದಾಗಿ ಘೋಷಿಸಿದರು.
ಪಕ್ಷ ತೆಗೆದುಕೊಂಡ ನಿರ್ಧಾರದಿಂದ ಪಕ್ಷದ ಪರವಾಗಿ ನಿಂತಿರುವ ಲಕ್ಷಾಂತರ ಕಾರ್ಯಕರ್ತರಿಗೆ ಮಾಡಿದ ದ್ರೋಹ. ಈ ನಿರ್ಧಾರ ನನಗೆ ಮಾತ್ರವಲ್ಲ, ಬಿಜೆಪಿಯನ್ನು ಬೆಂಬಲಿಸಿದ ಲಕ್ಷಾಂತರ ಕಾರ್ಯಕರ್ತರು, ನಾಯಕರು ಮತ್ತು ಮತದಾರರಿಗೆ ಆಘಾತವನ್ನುಂಟು ಮಾಡಿದೆ. ತೆಲಂಗಾಣವು ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಲು ಸಿದ್ಧವಾಗಿತ್ತು, ಆದರೆ ತಪ್ಪು ನಾಯಕತ್ವದ ಆಯ್ಕೆಯು ಅದನ್ನು ಅಪಾಯಕ್ಕೆ ಸಿಲುಕಿಸಿತು. ಒಂದೊಳ್ಳೆ ನಾಯಕತ್ವ ರಾಜ್ಯದಲ್ಲಿ ಬಿಜೆಪಿಗೆ ಅಗತ್ಯವಿದೆ ಎಂತಲೂ ರಾಜಾ ಸಿಂಗ್ ಪ್ರತಿಪಾದಿಸಿದರು














