
ಪುತ್ತೂರು: ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ ಹಾಗೂ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಯೋಗದಲ್ಲಿ ಜುಲೈ 19 ರಂದು ಬೆಂಗಳೂರಿನ ಶ್ರೀ ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ‘ಆಗಮ ಘಟಿಕೋತ್ಸವ-2025’ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಆಗಮ ವಿಭಾಗಗಳಿಂದ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗೌರವಿಸಲಾಗಿತು.
ಸುಮಾರು 2000 ವಿದ್ಯಾರ್ಥಿಗಳ ಪೈಕಿ ಅತ್ಯಧಿಕ ಅಂಕಗಳನ್ನು ಗಳಿಸಿದ 43 ಜನರಲ್ಲಿ ಪುತ್ತೂರಿನ ಪಿ.ಜಿ. ಜಗನ್ನಿವಾಸ ರಾವ್ ಹಾಗೂ ಪೊಳಲಿಯ ಗಿರಿಪ್ರಕಾಶ್ ತಂತ್ರಿ ಅವರಿಗೆ ವಾತುಲಾಗ ಪ್ರವೀಣ ಪದವಿ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ಆಯುಕ್ತ ಡಾ. ವೆಂಕಟೇಶ ಎಂ.ವಿ (ಐಎಎಸ್), ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಹಾಗೂ ಇತರ ಗಣ್ಯರು ನೀಡಿದರು. ಅವರಿಗೆ ಆಗಮ ಶಾಸ್ತ್ರ ಪ್ರಮಾಣಪತ್ರ, ಪದಕ ಹಾಗೂ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಪಿ.ಜಿ. ಜಗನ್ನಿವಾಸ ರಾವ್ ಮಂಗಳೂರು ವಿಶ್ವವಿದ್ಯಾನಿಲಯದಿಂದ ವೇದ, ತಂತ್ರ, ಆಗಮ ವಿಭಾಗದಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದವರು. ಅವರು ಪುತ್ತೂರು ನಗರಸಭೆಯ ಸದಸ್ಯರಾಗಿದ್ದಾರೆ.







