
ಪುತ್ತೂರು: ಹಂಟ್ಯಾರ್ ಶಾಲಾ ಬಳಿ ಸಾರ್ವಜನಿಕರ ಹಲವಾರು ವರ್ಷಗಳಿಂದಲೂ ಇತ್ತುಕೊಂಡಿದ್ದ ಬೇಡಿಕೆಯಾದ ಪ್ರಯಾಣಿಕರ ಬಸ್ ತಂಗುದಾಣವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಸಂಟ್ಯಾರ್ ಬ್ರಾಂಚ್ ವತಿಯಿಂದ ನಿರ್ಮಿಸಿ ಭಾನುವಾರ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬೂರು ರಿಬ್ಬನ್ ಕತ್ತರಿಸಿ ತಂಗುದಾಣವನ್ನು ಉದ್ಘಾಟಿಸಿದರು. ಅವರು ಮಾತನಾಡಿ – “ಎಸ್.ಡಿ.ಪಿ.ಐ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಪಕ್ಷ, ಸರಕಾರಗಳು ಮತ್ತು ಇಲಾಖೆಗಳು ನೀಡದ ಸೌಲಭ್ಯಗಳನ್ನು ಜನರಿಗೆ ಒದಗಿಸುವ ಮೂಲಕ ನಮ್ಮ ಹೋರಾಟವನ್ನು ಸಮಾಜಮುಖಿ ಕಾರ್ಯಗಳಾಗಿ ರೂಪಿಸುತ್ತೇವೆ” ಎಂದು ಹೇಳಿದರು.
ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು, ಹಂಟ್ಯಾರ್ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಬು ಮರಿಕೆರ, ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಹಮೀದ್ ಕಲ್ಲರ್ಪೆ, ಉದ್ಯಮಿ ಸಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಹಾಗೂ ಇತರರು ಭಾಷಣ ಮಾಡಿ, ಸಂಟ್ಯಾರ್ ಬ್ರಾಂಚ್ ಕೈಗೊಂಡ ಈ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಉಸ್ಮಾನ್ ಎ.ಕೆ, ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಗಣ್ಯರು ಹಾಗೂ ಉದ್ಯಮಿಗಳು ಹಾಜರಿದ್ದರು.
ಸ್ವಾಗತವನ್ನು ಶಾಫಿ ಮರಿಕೆ ಸಲ್ಲಿಸಿ, ಕಾರ್ಯಕ್ರಮವನ್ನು ಸಮದ್ ಝೆನಿತ್ ನಿರೂಪಿಸಿದರು.






