
ಬೆಂಗಳೂರಿನ (Bengaluru Road) ಕಳಪೆ ಮೂಲಸೌಕರ್ಯದ ಕುರಿತು ಇತ್ತೀಚೆಗೆ ಖ್ಯಾತ ಉದ್ಯಮಿ ಕಿರಣ್ ಮಜುಂದಾರ್ ಷಾ (Kiran Mazumdar Shaw) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನಡುವೆ ವಾಗ್ವಾದ ಏರ್ಪಟ್ಟಿತ್ತು.
ಇದರ ನಡುವೆಯೂ ಇಂದು ಬಯೋಕಾನ್ ಸಂಸ್ಥಾಪಕಿ ಷಾ ಹಾಗೂ ಡಿಕೆಶಿ ಅವರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಮಂಗಳವಾರ ಖ್ಯಾತ ಉದ್ಯಮಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿದರು.
ಇಬ್ಬರ ಭೇಟಿಯ ಉದ್ದೇಶದ ಬಗ್ಗೆ ಯಾವುದೇ ದೃಢವಾದ ಮಾಹಿತಿ ಇಲ್ಲ. ಈ ಬಗ್ಗೆ ಶಿವಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಭೇಟಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬರೆದಿರುವ ಡಿಕೆಶಿ, ನಾವು ಬೆಂಗಳೂರಿನ ಬೆಳವಣಿಗೆ, ನಾವೀನ್ಯತೆ ಮತ್ತು ಕರ್ನಾಟಕದ ಬೆಳವಣಿಗೆಯ ಮುಂದಿನ ಹಾದಿಯ ಕುರಿತು ಆಕರ್ಷಕ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಕಳಪೆ ರಸ್ತೆ ಹಾಗೂ ಕಸ ವಿಲೇವಾರಿಯ ಅವ್ಯವಸ್ಥೆ ಬಗ್ಗೆ ಷಾ ಇತ್ತೀಚೆಗೆ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡು ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಇದಾದ ಬಳಿಕ ಡಿಕೆಶಿ ಹಾಗೂ ಮಜುಂದಾರ್ ಶಾ ನಡುವೆ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ವಾಗ್ವಾದಗಳು ನಡೆದಿವೆ.
ಅಕ್ಟೋಬರ್ 13 ರಂದು, ಬಯೋಕಾನ್ಗೆ ಭೇಟಿ ನೀಡಿದ ವಿದೇಶಿ ಉದ್ಯಮಿಯೊಬ್ಬರು ಬೆಂಗಳೂರಿನ ರಸ್ತೆಗಳು ಮತ್ತು ಕಸ ನಿರ್ವಹಣೆಯ ಸ್ಥಿತಿಯನ್ನು ಪ್ರಶ್ನಿಸಿದ್ದಾರೆ ಎಂದು ಶಾ ಎಕ್ಸ್ನಲ್ಲಿ ತಿಳಿಸಿ, ಅದಕ್ಕೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟ್ಯಾಗ್ ಮಾಡಿದ್ದರು.
ಅಕ್ಟೋಬರ್ 19 ರಂದು, ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಮಾಡಿದ್ದಕ್ಕಾಗಿ ಐಟಿ/ಬಿಟಿ ಕೈಗಾರಿಕೋದ್ಯಮಿಗಳ ಮೇಲೆ ಡಿಕೆಶಿ ಪರೋಕ್ಷ ವಾಘ್ದಾಳಿ ನಡೆಸಿದ್ದರು. ಬೆಂಗಳೂರಿನ ಸೌಲಭ್ಯಗಳನ್ನೇ ಬಳಸಿಕೊಂಡು ವ್ಯವಹಾರ ಪ್ರಾರಂಭಿಸಿ ದೊಡ್ಡ ಮಟ್ಟಕ್ಕೆ ಬೆಳೆದವರು… ಈಗ ಬೆಂಗಳೂರಿನ ಬಗ್ಗೆ ಟೀಕಿಸುತ್ತಿದ್ದಾರೆ ಮತ್ತು ಟ್ವೀಟ್ ಮಾಡಿದ್ದರು. ನೀವು ನಿಮ್ಮ ಬೇರುಗಳನ್ನು ಮರೆತರೆ, ನಿಮಗೆ ಫಲ ಸಿಗುವುದಿಲ್ಲ ಎಂದಿದ್ದರು.






