
ಪುತ್ತೂರು: ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಭುವನ್ ಗೌಡ (34), ಕುಂಬ್ರ ನಿವಾಸಿ, ಮೃತಪಟ್ಟ ಘಟನೆ ಮಾ.3ರಂದು ತಿಂಗಳಾಡಿ ಸಮೀಪದ ತ್ಯಾಗರಾಜನಗರದಲ್ಲಿ ನಡೆದಿದೆ.
ಧರ್ಮಪಾಲ ಮತ್ತು ಮೋಹಿನಿ ಅವರ ಪುತ್ರರಾದ ಭುವನ್ ಗೌಡ ಅವರು ನಿಂತಿಕಲ್ಲಿನ ಕುಬೇರ ಬಾರ್ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮಾ.3ರಂದು ಸಂಜೆ ಕೆಲಸ ಮುಗಿಸಿ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ತ್ಯಾಗರಾಜನಗರದ ಮಚ್ಚಾರಡ್ಕಕ್ಕೆ ತಿರುಗುವ ರಸ್ತೆಯ ಬಳಿ ಬೈಕ್ ಸ್ಕಿಡ್ ಆಗಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು.
ಅಲ್ಲೇ ಸಮೀಪದ ಮನೆಯ ಅಭಿಲಾಷ್ ಅವರು ವಿಷಯ ತಿಳಿದು ತಕ್ಷಣ ನೆರವು ಕೋರಿದರು. ಸ್ಥಳಕ್ಕೆ ಬಂದ ಅಶೋಕ್ ಹಾಗೂ ಇತರರು ಗಾಯಾಳುವಿಗೆ ಪ್ರಾಥಮಿಕ ನೆರವು ನೀಡಿದರು. ಇದೇ ವೇಳೆ ಕುಂಬ್ರದಿಂದ ತಿಂಗಳಾಡಿ ಕಡೆಗೆ ಸಾಗುತ್ತಿದ್ದ ಕಾರಿನಲ್ಲಿ ಇದ್ದ ರಜಾಕ್ ಹಾಗೂ ಇತರರು ಸೇರಿಕೊಂಡು ಭುವನ್ ಅವರನ್ನು ತಮ್ಮ ಕಾರಿನಲ್ಲಿ ಸಂಪ್ಯದ ಮೆಡ್ ಲ್ಯಾಂಡ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ತರಲಾಯಿತು.
ಮೃತರು ತಂದೆ-ತಾಯಿ ಹಾಗೂ ಸಹೋದರಿಯರಾದ ನಯನಾ (ಶರತ್ ಕುಮಾರ್ ಮಾಡಾವು) ಮತ್ತು ಸೌಮ್ಯ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಭುವನ್ ಗೌಡ ಅವರು ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.








