ಮಧ್ಯಪ್ರಾಚ್ಯ ಸಂಘರ್ಷ ಹಿನ್ನೆಲೆಯಲ್ಲಿ ದೇಶಾದ್ಯಂತ ಸೃಷ್ಟಿಯಾಗಿರುವ ಎಲ್‌ಪಿಜಿ ಬಿಕ್ಕಟ್ಟು ಇದೀಗ ವಲಸೆ ಕಾರ್ಮಿಕರ ಮೇಲೂ ಗಂಭೀರ ಪರಿಣಾಮ ಬೀರಲಾರಂಭಿಸಿದೆ. ಹೋಟೆಲ್‌ಗಳು ಸೇರಿ ಎಲ್‌ಪಿಜಿಯನ್ನೇ ಅವಲಂಬಿಸಿರುವ ಉದ್ದಿಮೆಗಳು ತಾತ್ಕಾಲಿಕವಾಗಿ ಬಾಗಿಲು ಹಾಕುತ್ತಿರುವ ಹಿನ್ನೆಲೆಯಲ್ಲಿ ಇದನ್ನೇ ನಂಬಿಕೊಂಡು ಮೆಟ್ರೋ ನಗರಗಳಲ್ಲಿ ಬದುಕು ಕಟ್ಟಿಕೊಂಡಿರುವ ವಲಸೆ ಕಾರ್ಮಿಕರು ಇದೀಗ ಅನಿವಾರ್ಯವಾಗಿ ತಮ್ಮೂರಿನತ್ತ ಮುಖಮಾಡುತ್ತಿದ್ದಾರೆ.

ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶದ ಬಹುತೇಕ ಪ್ರಮುಖ ನಗರಗಳಲ್ಲಿ ಹೋಟೆಲ್‌ಗಳು, ಡಾಬಾಗಳು, ಹೋಟೆಲ್‌ಗಳು ಬಿಹಾರ ಮತ್ತಿತರ ಕಡೆಯಿಂದ ಆಗಮಿಸುವ ವಲಸೆ ಕಾರ್ಮಿಕರನ್ನೇ ಅವಲಂಬಿಸಿವೆ. ಗ್ಯಾಸ್‌ ದರ ಹೆಚ್ಚಳ ಹಾಗೂ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಹೆಚ್ಚಿನ ರಸ್ತೆ ಬದಿ ತಿಂಡಿ-ತಿನಿಸು ಅಂಗಡಿಗಳು, ಕೆಲ ಹೋಟೆಲ್‌ಗಳು ಬಾಗಿಲು ಹಾಕಿವೆ. ಇದರಿಂದಾಗಿ ಇವುಗಳನ್ನೇ ನಂಬಿಕೊಂಡ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ.

ಹೋಟೆಲ್‌ ಕೆಲಸ ಇಲ್ಲದಿದ್ದರೆ ಬೇರೆ ಕೆಲಸವನ್ನಾದರೂ ಮಾಡೋಣ ಅಂದ್ರೆ ಮನೆಯಲ್ಲಿ ಅಡುಗೆ ಮಾಡಿಕೊಳ್ಳಲಾದರೂ ಗ್ಯಾಸ್‌ ಬೇಕೇ ಬೇಕು. ಅಲ್ಲದೆ ದಿನ ಬಳಕೆಯ ವಸ್ತುಗಳ ಬೆಲೆಗಳೂ ಏರಿಕೆಯಾಗುತ್ತಿವೆ. ಹೀಗಾಗಿ ನಾವು ಕೆಲಕಾಲ ಊರಿಗೆ ವಾಪಸಾಗಲು ನಿರ್ಧರಿದ್ದೇವೆ ಎಂದು ಕೆಲ ಕಾರ್ಮಿಕರು ಹೇಳಿಕೊಂಡಿದ್ದಾರೆ.

ಭಾರತದ ಉತ್ತರ ಭಾಗಕ್ಕೆ ಹೊರಡುವ ರೈಲುಗಳು ಭರ್ತಿ

ಹೀಗಾಗಿ ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳಕ್ಕೆ ತೆರಳುವ ರೈಲುಗಳು ಕಾರ್ಮಿಕರಿಂದ ತುಂಬಿ ತುಳುಕುತ್ತಿವೆ. ಮುಂಬೈನಲ್ಲಂತು ಉತ್ತರಭಾರತದ ದಿನಗೂಲಿ ನೌಕರರು ಹೆಚ್ಚಿನ ಪ್ರಮಾಣದಲ್ಲಿದ್ದು, ಅವರಲ್ಲಿ ಹೆಚ್ಚಿನವರು ಊರಿಗೆ ವಾಪಸಾಗುತ್ತಿದ್ದಾರೆ. ಊರಲ್ಲಾದರೆ ಕಟ್ಟಿಗೆ ಬಳಸಿಯಾದರೂ ಅಡುಗೆ ಮಾಡಿ ಬದುಕಬಹುದು, ಈ ಮಹಾನಗರದಲ್ಲಿ ಅದೂ ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.

ಕಳೆದೊಂದು ತಿಂಗಳಿಂದ ಗುಜರಾತ್‌ನ ಸೂರತ್‌ನಿಂದ ಸುಮಾರು 1.5 ಲಕ್ಷ ಮಂದಿ, ಪಂಜಾಬ್‌ನಲ್ಲಿ ಸುಮಾರು 50 ಸಾವಿರ ವಲಸೆ ಕಾರ್ಮಿಕರು ಊರಿಗೆ ವಾಪಸಾಗಿದ್ದಾರೆ ಎನ್ನಲಾಗಿದೆ.

ಗ್ಯಾಸ್‌ ದರ ಭಾರೀ ಏರಿಕೆ

ಹಿಂದೆ 5 ಕೆ.ಜಿ.ಯ ಸಣ್ಣ ಎಲ್‌ಪಿಜಿ ಸಿಲಿಂಡರ್‌ ದರ 500 ರು. ಇತ್ತು. ಅದೀಗ 1,100ರಿಂದ 2000 ರು.ವರೆಗೆ ಏರಿಕೆಯಾಗಿದೆ. 14.2 ಕೆ.ಜಿ. ಸಿಲಿಂಡರ್‌ 3 ರಿಂದ 4 ಸಾವಿರ ರು.ವರೆಗೆ ಮಾರಾಟ ವಾಗುತ್ತಿದೆ. ಇದು ರಸ್ತೆ ಬದಿ ವ್ಯಾಪಾರಿಗಳು, ಡಾಬಾ ಮಾಲೀಕರ ಮೇಲೆ ಭಾರೀ ಹೊಡೆತ ನೀಡುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!