ಪುತ್ತೂರು, ಏ.9: ಹನುಮಗಿರಿ ಶ್ರೀ ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಬುಧವಾರ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಿಂದ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ ನೆರವೇರಿತು. ಬ್ರಹ್ಮಕಲಶೋತ್ಸವವು ಏ.9ರಿಂದ 12ರವರೆಗೆ ನಡೆಯಲಿದೆ.
ಸಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವಸ್ಥಾನದ ವಠಾರದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತೆಂಗಿನಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ನೂರಾರು ವಾಹನಗಳಲ್ಲಿ ಹಸಿರು ಹೊರೆಕಾಣಿಕೆಗಳನ್ನು ಸಾಗಿಸಲಾಯಿತು. ಮೆರವಣಿಗೆ ದರ್ಬೆಯ ತನಕ ಕಾಲ್ನಡಿಗೆಯಲ್ಲಿ ಸಾಗಿದ್ದು, ಅಲ್ಲಿಂದ ವಾಹನಗಳ ಮೂಲಕ ಹನುಮಗಿರಿ ಕ್ಷೇತ್ರಕ್ಕೆ ತೆರಳಿತು.
ಶ್ರೀರಾಮ–ಸೀತಾದೇವಿ–ಹನುಮ ವೇಷಧಾರಿಗಳ ವಾಹನ, ಕಲ್ಲಡ್ಕ ಗೊಂಬೆ, ವಾದ್ಯಗೋಷ್ಠಿ, ಚೆಂಡೆಮೇಳ ಹಾಗೂ ಕುಣಿತ ಭಜಕರ ತಂಡ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.
ಕಾರ್ಯಕ್ರಮದಲ್ಲಿ ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹೊರೆಕಾಣಿಕೆ ಸಮಿತಿ ಸಂಚಾಲಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಜೀವಂಧರ್ ಜೈನ್, ರಾಕೇಶ್ ರೈ ಕೆಡೆಂಜಿ, ಉಪಾಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ, ಸಾಜ ರಾಧಾಕೃಷ್ಣ ಆಳ್ವ, ಮುರಳೀಕೃಷ್ಣ ಹಸಂತಡ್ಕ, ಪ್ರಧಾನ ಕಾರ್ಯದರ್ಶಿಗಳಾದ ಆರ್.ಸಿ. ನಾರಾಯಣ ರೆಂಜ, ನಹುಷ ಪಿ.ವಿ., ಕೋಟಿ ಶ್ರೀರಾಮತಾರಕ ಜಪಯಜ್ಞ ಸಮಿತಿ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಾಜಿ ಶಾಸಕ ಸಂಜೀವ ಮಠಂದೂರು, ಡಾ. ಸುರೇಶ ಪುತ್ತೂರಾಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್, ತಾಲೂಕು ಯೋಜನಾಧಿಕಾರಿ ಶಶಿಧರ್, ಅರುಣ್ ಕುಮಾರ್ ಪುತ್ತಿಲ, ಅಜಿತ್ ರೈ ಹೊಸಮನೆ, ಗೋಪಾಲಕೃಷ್ಣ ಹೇರಳೆ, ಶ್ರೀಧರ ಪಟ್ಲ, ಯು. ಲೋಕೇಶ್ ಹೆಗ್ಡೆ, ದಿನೇಶ್ ಮೆದು, ವಿದ್ಯಾ ಗೌರಿ, ಪದ್ಮನಾಭ ಶೆಟ್ಟ್ರಟಿ, ಸುಂದರ ಪೂಜಾರಿ ಬಡಾವು, ಉಜ್ವಲ್ ಪ್ರಭು, ನವೀನ್ ರೈ ಕೈಕಾರ ಮೊದಲಾದವರು ಭಾಗವಹಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರ್ವಹಿಸಿದರು.
ಇದಕ್ಕೂ ಮೊದಲು ಬೆಳಿಗ್ಗೆ ಈಶ್ವರಮಂಗಲ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಬಳಿಕ ಕ್ಷೇತ್ರದಲ್ಲಿ ಉಗ್ರಾಣ ಮುಹೂರ್ತ ನೆರವೇರಿದ್ದು, ಭಜನ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.














