ಪುತ್ತೂರು: ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಗುರುವಾರ ಸಂಭ್ರಮ ಹಾಗೂ ಸಡಗರದಿಂದ ಆಚರಿಸಿದರು. ಬೆಳಿಗ್ಗೆಯಿಂದಲೇ ಮಸೀದಿಗಳಿಗೆ ಆಗಮಿಸಿದ ಭಕ್ತರು ವಿಶೇಷ ಈದ್ ನಮಾಝ್ ಸಲ್ಲಿಸಿದರು.
ನಮಾಝ್ ಬಳಿಕ ಪರಸ್ಪರ ಹಸ್ತಲಾಘವ ಹಾಗೂ ಆಲಿಂಗನದ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ವಿವಿಧ ಮಸೀದಿಗಳಲ್ಲಿ ಈದ್ ವಿಶೇಷ ನಮಾಝ್ ಹಾಗೂ ಖುತ್ಬಾ ಪಾರಾಯಣ ನಡೆಯಿತು.


ಆರ್.ಜೆ.ಎಂ ಮುಕ್ವೆ ಮಸೀದಿಯಲ್ಲಿ ಖತೀಬರಾದ ಮುಹಮ್ಮದ್ ಇರ್ಷಾದ್ ಫೈಝಿ (ಪಾಲ್ತಾಡ್ ಬೆಳ್ಳಾರೆ) ಅವರು ಈದ್ ನಮಾಝ್‌ಗೆ ನೇತೃತ್ವ ವಹಿಸಿ ಖುತ್ಬಾ ಪಾರಾಯಣ ಮಾಡಿದರು. ತಮ್ಮ ಈದ್ ಸಂದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ವಾಹನ ಅಪಘಾತಗಳು ಹೆಚ್ಚುತ್ತಿದ್ದು, ಸಾವು–ನೋವುಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಯುವಜನತೆ ವಾಹನ ಚಾಲನೆ ವೇಳೆ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.
ದ್ವಿಚಕ್ರ ವಾಹನ ಸವಾರರು ತ್ರಿಬಲ್ ರೈಡ್ ಸೇರಿದಂತೆ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಬಾರದು. ಪೊಲೀಸ್ ಇಲಾಖೆಯ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಸಲಹೆ ನೀಡಿದರು. ನಿರ್ಲಕ್ಷ್ಯದಿಂದ ಜೀವಹಾನಿ ಸಂಭವಿಸಿದರೆ ಕುಟುಂಬದವರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಹೇಳಿದರು.
ಯುವಕರು ಮಾದಕ ವ್ಯಸನಗಳಿಗೆ ಬಲಿಯಾಗದಂತೆ ಜಾಗೃತರಾಗಬೇಕು. ನೆರೆಹೊರೆಯವರೊಂದಿಗೆ ಸಹೋದರಭಾವದಿಂದ ನಡೆದುಕೊಂಡು ಶಾಂತಿ–ಸೌಹಾರ್ದದಿಂದ ಬದುಕಬೇಕು ಎಂದು ಅವರು ಕರೆ ನೀಡಿದರು.
ರಹ್ಮಾನಿಯ ಜುಮ್ಮಾ ಮಸೀದಿಯ ನೂತನ ಅಧ್ಯಕ್ಷ ಎಂ.ಕೆ. ಖಾಸಿಂ ಹಾಜಿ, ಪ್ರಧಾನ ಕಾರ್ಯದರ್ಶಿ ಇಸಾಕ್ ಹಾಜಿ ಪಡೀಲ್ ಸೇರಿದಂತೆ ಜಮಾಅತ್ ಸದಸ್ಯರು ಈದ್ ನಮಾಝ್‌ನಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!