ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramiah ) ಹಾಗೂ ಸರ್ಕಾರದ ವಿರುದ್ಧ ನಮಗೆ ಯಾವುದೇ ರೀತಿಯ ವೈಯಕ್ತಿಕ ದ್ವೇಷ ಅಥವಾ ಹಗೆತನ ಇಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ (Pramodadevi wadiyar ) ಅವರು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ.
ರಾಜಮನೆತನ ಮತ್ತು ಸಿಎಂ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ವದಂತಿಗಳಿಗೆ ಅವರು ಈ ಮೂಲಕ ತೆರೆ ಎಳೆದಿದ್ದಾರೆ. ಬೆಂಗಳೂರಲ್ಲಿ ಮಾತಾಡಿದ ಅವರು ಸಿಎಂ ಸಿದ್ದರಾಮಯ್ಯ ಮೇಲೆ ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯ ಅಥವಾ ದ್ವೇಷ ಇಲ್ಲ ಎಂದಿದ್ದಾರೆ.
ಅರಮನೆ ಆಸ್ತಿ ವಿವಾದ ಹಾಗೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಾನೂನು ಹೋರಾಟದ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, “ನಮ್ಮ ಹೋರಾಟ ಏನಿದ್ದರೂ ಕಾನೂನಾತ್ಮಕವಾಗಿ ನಮ್ಮ ಹಕ್ಕುಗಳಿಗಾಗಿ ಮಾತ್ರವೇ ಹೊರತು ಯಾವುದೇ ವ್ಯಕ್ತಿಗತ ವಿರೋಧದಿಂದಲ್ಲ. ರಾಜಮನೆತನವು ಎಂದಿಗೂ ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡುವುದಿಲ್ಲ” ಎಂದಿದ್ದಾರೆ.
ಕೇವಲ ನ್ಯಾಯ ಮತ್ತು ಅರಮನೆಯ ಐತಿಹಾಸಿಕ ಗೌರವವನ್ನು ರಕ್ಷಿಸಲು ಸಂವಿಧಾನಬದ್ಧವಾಗಿ ಹೋರಾಡುತ್ತಿದ್ದೇವೆ ಎಂದು ಪುನರುಚ್ಚರಿಸಿದ ಅವರು, ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದ ಹಲವು ಚರ್ಚೆಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.













