ಜೈಪುರ (ಜೂ.28): ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಭಗೀರಥ್ ಚೌಧರಿ ರಾಜಸ್ಥಾನದಲ್ಲಿರುವ ತಮ್ಮ ಜಮೀನಿನ ಸೌತೆಕಾಯಿ ಬೆಳೆಗಾಗಿ ತಮ್ಮದೇ ಸಚಿವಾಲಯದಿಂದ 99.60 ಲಕ್ಷ ರು.ಸಹಾಯಧನ ಪಡೆದ ವಿಷಯ ಬೆಳಕಿಗೆ ಬಂದಿದೆ. ವಿಶೇಷವೆಂದರೆ, ಈ ಸಬ್ಸಿಡಿಗೆ ಅನುಮೋದನೆ ನೀಡಿರುವ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ (ಎನ್ಎಚ್ಬಿ) ಉಪಾಧ್ಯಕ್ಷರೂ ಚೌಧರಿ ಅವರೇ ಆಗಿದ್ದಾರೆ.ನಾಮಫಲಕದಲ್ಲಿ ಏನಿದೆ?ರಾಜಸ್ಥಾನದ ದೀದ್ವಾನಾ-ಕುಚಾಮನ್ ಜಿಲ್ಲೆಯ ಪೀಹ್ ಗ್ರಾಮದಲ್ಲಿ ಚೌಧರಿ 4 ದೊಡ್ಡ ಪಾಲಿಹೌಸ್ಗಳಿರುವ 16,592 ಚದರ ಮೀ. ವಿಸ್ತೀರ್ಣದ ಜಮೀನು ಹೊಂದಿದ್ದಾರೆ. ಇಲ್ಲಿ ನಾಮಫಲಕವೊಂದನ್ನು ಅಳವಡಿಸಲಾಗಿದೆ. ಅದರಲ್ಲಿ ‘ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಿಂದ 99,60,000 ರು. ಸಬ್ಸಿಡಿ ಮೊತ್ತ ಪಡೆದಿದೆ’ ಎಂದು ಬರೆಯಲಾಗಿದೆ. ಅನುಮೋದನೆ ಪಡೆದ ಕೇವಲ 467 ಮಂದಿ ಫಲಾನುಭವಿಗಳಲ್ಲಿ ಚೌಧರಿ ಕೂಡ ಒಬ್ಬರಾಗಿದ್ದಾರೆ.ನಾನು ಏನೂ ಮುಚ್ಚಿಟ್ಟಿಲ್ಲ: ಚೌಧರಿ ಸ್ಪಷ್ಟನೆಆದರೆ ವಿಚಾರಗಳು ವರದಿಯಾಗುತ್ತಿದ್ದಂತೆ ಎಎನ್ಐಗೆ ಪ್ರತಿಕ್ರಿಯಿಸಿರುವ ಸಚಿವರು. ನಾನು ಏನು ಮರೆಮಾಚಿಲ್ಲ. ದೇಶದ ಸಾವಿರಾರು ರೈತರಂತೆ ನಾನೂ ಸಬ್ಸಿಡಿ ಪಡೆದಿದ್ದೇನೆ. ಇದರಲ್ಲಿ ಏನನ್ನೂ ಮುಚ್ಚಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ನಾನು ಕೇಂದ್ರ ಸಚಿವನಾಗಿರಬಹುದು. ಆದರೆ ಮೂಲತಃ ನಾನೊಬ್ಬ ರೈತ. ನನ್ನ ಬಾಲ್ಯದ ದಿನಗಳಿಂದಲೂ ಕೃಷಿಯಲ್ಲಿದ್ದೇನೆ.. ನಾನು ಏನನ್ನೂ ಮರೆಮಾಡಿಲ್ಲ. ಸಾವಿರಾರು ರೈತರು ಪಾಲಿಹೌಸ್ಗಳನ್ನು ಬಳಸುತ್ತಾರೆ ಮತ್ತು ಸಬ್ಸಿಡಿಗಳನ್ನು ಪಡೆಯುತ್ತಾರೆ. ಹಾಗಾಗಿ, ನಾನು ಕೂಡ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.







