ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಗ್ಗನಹಳ್ಳಿಯ ರಾಜೇಶ್ವರಿ ನಗರದಲ್ಲಿ ದಂಪತಿಯ ಕೌಟುಂಬಿಕ ಕಲಹ ದುರಂತ ಅಂತ್ಯ ಕಂಡಿದೆ.ಪತ್ನಿಗೆ ಕಪಾಳಕ್ಕೆ ಹೊಡೆದ ಬಳಿಕ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆತಂಕಗೊಂಡ ಪತಿ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಹುಬ್ಬಳ್ಳಿ ಮೂಲದ ಪದ್ಮಾವತಿ (29) ಮೃತಪಟ್ಟ ಮಹಿಳೆಯಾಗಿದ್ದು, ಅವರು ವೈಟ್ಫೀಲ್ಡ್ ಸಮೀಪದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ದಕ್ಷಿಣ ಕನ್ನಡ ಮೂಲದ ಸುಮಂತ್ (32) ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಗಲಾಟೆ ದುರಂತದಲ್ಲಿ ಅಂತ್ಯಸುಮಾರು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿ ಕಳೆದ ಒಂದೂವರೆ ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಬುಧವಾರ ರಾತ್ರಿ ಇಬ್ಬರ ನಡುವೆ ಕೌಟುಂಬಿಕ ವಿಚಾರವಾಗಿ ಜಗಳ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿದ ವೇಳೆ ಸುಮಂತ್ ಪತ್ನಿಯ ಕಪಾಳಕ್ಕೆ ಹೊಡೆದಿದ್ದಾನೆ ಎನ್ನಲಾಗಿದೆ.ಪದ್ಮಾವತಿ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಕಂಡ ಸುಮಂತ್, ಮನೆಯ ಹಾಲ್ನಲ್ಲಿದ್ದ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.ತಾಯಿಗೆ ಕೊನೆಯ ಸಂದೇಶಘಟನೆಯ ಮೊದಲು ಪದ್ಮಾವತಿ ತನ್ನ ತಾಯಿಗೆ, “ನಾನು ಸಾಯುತ್ತಿದ್ದೇನೆ, ಹಣ ಮತ್ತು ಒಡವೆ ತೆಗೆದುಕೊಂಡು ಹೋಗಿ” ಎಂಬ ಸಂದೇಶ ಕಳುಹಿಸಿದ್ದರೆಂದು ತಿಳಿದುಬಂದಿದೆ. ಈ ಸಂದೇಶವೂ ತನಿಖೆಯ ಪ್ರಮುಖ ಭಾಗವಾಗಿದೆ.ಶ್ರೀಲಂಕಾ ಪ್ರವಾಸದ ಕನಸು ಅಪೂರ್ಣಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ಪ್ರವಾಸಕ್ಕೆ ತೆರಳಲು ದಂಪತಿ ಯೋಜನೆ ರೂಪಿಸಿದ್ದು, ಈ ವಿಚಾರವನ್ನು ಸುಮಂತ್ ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ ಅದೇ ಕುಟುಂಬ ಕೆಲವೇ ಗಂಟೆಗಳಲ್ಲಿ ದುರಂತಕ್ಕೆ ಸಾಕ್ಷಿಯಾಗಿದೆ.ಘಟನಾ ಸ್ಥಳಕ್ಕೆ ರಾಜಗೋಪಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಸಹಜ ಸಾವು ಹಾಗೂ ಕೌಟುಂಬಿಕ ಕಲಹದ ಎಲ್ಲಾ ಆಯಾಮಗಳಲ್ಲಿ ಪ್ರಕರಣದ ತನಿಖೆ ಮುಂದುವರಿದಿದೆ.










