
ಮಂಗಳೂರು : ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ ಜೆಬಿಎಫ್ ಕಂಪನಿ ಸ್ಥಾಪನೆಗೆ ಜಮೀನು ಬಿಟ್ಟುಕೊಟ್ಟ ನಿರ್ವಸತಿಗರಿಗೆ ಎದುರಾಗಿದ್ದ ಉದ್ಯೋಗ ಪಡೆಯುವ ಸಮಸ್ಯೆ ಇತ್ಯರ್ಥವಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ (ಎಂಎಸ್ಇಝೆಡ್) ಜೆಬಿಎಫ್ ಕಂಪನಿ ಸ್ಥಾಪನೆಗೆ ಜಮೀನು ಬಿಟ್ಟುಕೊಟ್ಟಿದ್ದವರ ಪೈಕಿ 69 ಮಂದಿಗೆ ಜಿಎಂಪಿಎಲ್ (ಗೇಲ್ ಇಂಡಿಯಾ) ಕಂಪನಿಯಲ್ಲಿ ಉದ್ಯೋಗ ಕಲ್ಪಿಸುವ ನೇಮಕಾತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಯಾವುದೇ ಕಂಪನಿಯಲ್ಲಿ ಉದ್ಯೋಗಿಗಳ ನಡವಳಿಕೆ ಬಹಳ ಮುಖ್ಯ. ದೇಶದ ಬೇರೆ ಬೇರೆ ಕಡೆಯಿಂದ ಇಲ್ಲಿಗೆ ಬರುವ ಉದ್ಯೋಗಿಗಳಿಗೆ ನಮ್ಮ ನಡವಳಿಕೆ ಮಾದರಿಯಾಗಬೇಕು. ನಡೆ, ನುಡಿ, ನಡವಳಿಕೆ ಮೂಲಕ ಕಂಪನಿಯಲ್ಲಿ ಉತ್ತಮ ವಾತಾವರಣ ನಿರ್ಮಿಸಿ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಬೇಕು ಎಂದು ಹೇಳಿದರು.
ಗೇಲ್ ಇಂಡಿಯಾವು ಜೆಬಿಎಫ್ ಪೆಟ್ರೊ ಕೆಮಿಕಲ್ಸ್ನ ಪಿಟಿಎ ಸ್ಥಾವರ ಸ್ವಾಧೀನಪಡಿಸಿಕೊಂಡು, ಗೇಲ್ ಮಂಗಳೂರು ಪೆಟ್ರೋಕೆಮಿಕಲ್ಸ್ ಸ್ಥಾಪಿಸಿತ್ತು. ಆಗ ಜಿಎಂಪಿಎಲ್ ಕಂಪನಿಯು ಜೆಬಿಎಫ್ನ ಯೋಜನೆಯಿಂದ ತೊಂದರೆಗೊಳಗಾದ ಕುಟುಂದವರಿಗೆ ಮಾತ್ರ ಗುತ್ತಿಗೆ ಆಧಾರಿತ ಉದ್ಯೋಗ ಮಾತ್ರ ನೀಡಲು ಪರಿಗಣಿಸಿತ್ತು. ಇದರಿಂದ ಜೆಬಿಎಫ್ನ ಉದ್ಯೋಗಸ್ಥರು ಅತಂತ್ರ ಸ್ಥಿತಿಯಲ್ಲಿದ್ದರು. ಈ ವಿಷಯವನ್ನು ಸಂಸದ ಬ್ರಿಜೇಶ್ ಚೌಟ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರು.






