
ಉಳ್ಳಾಲ: ಯುವ ಉದ್ಯಮಿ, ಮೋರ್ಲ ಕಂಬಳ ಕೋಣದ ಯಜಮಾನ ಸುಧಾಕರ ಆಳ್ವ ಮೋರ್ಲ ಕಂಬಳಕೋಡಿ (45) ಅವರು ಆಕಸ್ಮಿಕವಾಗಿ ಮನೆಯ ಪಕ್ಕದ ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಬೇಕರಿ ತಿಂಡಿ-ತಿನಿಸುಗಳ ತಯಾರಕರಾಗಿ, ಯುವ ಉದ್ಯಮಿಯಾಗಿ ಜನಾನುರಾಗಿಯಾಗಿದ್ದ ಸುಧಾಕರ ಆಳ್ವರು ಮಂಗಳವಾರ ತೋಟಕ್ಕೆ ನೀರು ಹಾಯಿಸಲು ಹಾಕಿದ್ದ ಮೋಟಾರ್ ಪಂಪ್ ಅನ್ನು ಬಂದ್ ಮಾಡಲು ಕೆರೆ ಬಳಿ ತೆರಳಿದ್ದರು.
ಮನೆಮಂದಿ ಚಹಾ ಕುಡಿಯಲು ಅವರನ್ನು ಕರೆಯಲು ಕೆರೆ ಬಳಿ ತೆರಳಿದಾಗ ಅವರ ಕೈಯಲ್ಲಿದ್ದ ಕೃಷಿಗೆ ಸಂಬಂಧಿ ಪರಿಕರಗಳು ಕೆರೆ ಪಕ್ಕದಲ್ಲಿ ಬಿದ್ದಿದ್ದು, ಚಪ್ಪಲಿ ನೀರಿನಲ್ಲಿ ತೇಲುತ್ತಿದ್ದುದು ಕಂಡುಬಂದಿದೆ. ಅಕ್ಕ-ಪಕ್ಕ ಹುಡುಕಾಟ ನಡೆಸಿದರೂ, ಅವರ ಪತ್ತೆಯಾಗಿರಲಿಲ್ಲ.
ಬಳಿಕ ಕೆರೆಗೆ ಬಿದ್ದಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೆರೆಯಲ್ಲಿ ಶೋಧನೆ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಅವರು ಕೆರೆ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಹುಲ್ಲಿನ ಮೇಲೆ ಕಾಲಿಟ್ಟಾಗ ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ್ದು, ಕೆರೆಗೆ ಬಿದ್ದ ರಭಸದಲ್ಲಿ ಅವರಿಗೆ ಗಾಯಗಳಾಗಿವೆ.
ಸಾಮಾಜಿಕ, ಧಾರ್ಮಿಕವಾಗಿ ತೊಡಗಿಸಿಕೊಂಡಿದ್ದ ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






