
ವಿಜಯಪುರ: ರಾಜ್ಯ ಬಿಜೆಪಿಯಲ್ಲಿ (BJP) ಬಣ ರಾಜಕಾರಣ ಜೋರಾಗಿದ್ದು, ಈ ವಿಚಾರವಾಗಿ ಬಿಜೆಪಿ ಹಿರಿಯ ನಾಯಕ ಡಿವಿ ಸದಾನಂದಗೌಡ (DV Sadanandagowda) ಅವರು ಯತ್ನಾಳ್ ಟೀಂ (Yatnal Team) ವಿರುದ್ಧ ಖಾರವಾಗಿ ಮಾತನಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಇದೀಗ ಯತ್ನಾಳ್ ಅವರು, ಬಾಯಿ ಮುಚ್ಕೊಂಡ ಇರದಿದ್ರೆ ನಿಮ್ಮ ಬಂಡವಾಳ ಬಯಲು ಮಾಡ್ತೀನಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಸದಾನಂದಗೌಡ ಬಾಯಿ ಮುಚ್ಚಿಕೊಂಡು ಇರಬೇಕು
ಸದಾನಂದಗೌಡ ಬಾಯಿ ಮುಚ್ಚಿಕೊಂಡು ಇರಬೇಕು. ಇಲ್ಲದೆ ಹೋದರೆ ಅವರ ಬಂಡವಾಳ ಬಯಲು ಮಾಡ್ತೇನೆ. ಈ ಹಿಂದೆ ಇದೆ ಸದಾನಂದಗೌಡರು ಯಡಿಯೂರಪ್ಪ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ, ಇಲ್ಲ ಎನ್ನೋದಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಲಿ.. ಯಡಿಯೂರಪ್ಪ ಕುಟುಂಬದ ವಿರುದ್ಧ ಸದಾನಂದಗೌಡರು ಮಾತನಾಡಿರೋದನ್ನೆಲ್ಲ ಬಿಚ್ಚಿಡ್ತೀನಿ. ನನಗಿಂತ ಕೆಟ್ಟದಾಗಿ ಸದಾನಂದಗೌಡ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.
ಸದಾನಂದಗೌಡರ ದೀಪ ಆರುತ್ತಿದೆ
ನಾನು ವಕ್ಫ ವಿರುದ್ಧ ಮಾತನಾಡಿದ್ದೇನೆ ಸದಾನಂದಗೌಡ ಯಾಕೆ ಗಾಭರಿಯಾಗಬೇಕು? ಸದಾನಂದಗೌಡರೇ ಗಾಭರಿಯಾಗಬೇಡಿ, ದೀಪ ಆರುವವರ ಬಗ್ಗೆ ನಾನು ಮಾತನಾಡಲ್ಲ… ಸದಾನಂದಗೌಡರ ದೀಪ ಆರುತ್ತಿದೆ ಎಂದ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.
ಸದಾನಂದಗೌಡ ಹೇಳಿದ್ದೇನು?
ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದ್ದು ಹೈಕಮಾಂಡ್, ಅವರನ್ನ ವಿರೋಧ ಮಾಡುವವರು ದೆಹಲಿಗೆ ಹೋಗಿ ಮಾತನಾಡಬೇಕು. ಅದು ಬಿಟ್ಟು ಬೀದರ್ ನಲ್ಲಿ ನಿಂತು ತಮಟೆ ಬಾರಿಸುತ್ತಿದ್ದಾರೆ. ಅವರು ಎಲ್ಲರು ಹೈಕಮಾಂಡ್ ಗೆ ಹತ್ತಿರ ಇರೋರೇ.. ಈಗ ಬೀದಿಯಲ್ಲಿ ಮಾತನಾಡ್ತಿದ್ದಾರೆ ಅಂದರೆ ಅವರು ಯೋಗ್ಯರಲ್ಲ. ಎಂದು ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ಡಿವಿಎಸ್ ಕಿಡಿಕಾರಿದ್ದಾರೆ.
ಬೀದಿಯಲ್ಲಿ ಕೈ ಕೈ ಮಿಲಾಯಿಸೋದು ಬಿಟ್ಟು ದೆಹಲಿಗೆ ಹೋಗಿ
ಬೀದಿಯಲ್ಲಿ ಕೈ ಕೈ ಮಿಲಾಯಿಸೋದು ಬಿಟ್ಟು ದೆಹಲಿಗೆ ಹೋಗಿ ವರಿಷ್ಠರ ಜೊತೆ ಮಾತಾಡಿ, ಪಕ್ಷದ ಆಂತರಿಕ ವಿಷಯದ ಬಗ್ಗೆ ಯಾರು ಮಾತಾಡಿದ್ರು ಅದು ಅಶಿಸ್ತು.. ನಾನು ಶಸ್ತ್ರ ತ್ಯಾಗ ಮಾಡುವ ಪ್ರಶ್ನೇಯೇ ಇಲ್ಲ, ಪಕ್ಷದಲ್ಲಿ ಶುದ್ದೀಕರಣವಾಗಬೇಕು. ಎರಡು ಬಣಗಳು ಬೀದಿಗೆ ಹೋಗುವ ಬದಲು ಫ್ಲೈಟ್ ಹತ್ತಿ ದೆಹಲಿಗೆ ಹೋಗಿ.. ಪಕ್ಷದ ಮೇಲೆ ನಿಮಗೆ ನಿಜವಾಗಿಯೂ ಗೌರವ ಇದ್ದರೆ ಹೋಗಿ, ಇಲ್ಲ ಅಂದರೆ ನೀವೇ ಸ್ವಾರ್ಥಿಗಳು.. ಇಲ್ಲ ಅಂದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಅನ್ನಿಸಿಕೊಳ್ಳೋಕೆ ನೀವು ನಾಲಾಯಕ್ಕೂ ಎಂದು ವಾಗ್ಧಾಳಿ ನಾಡಿಸಿದರು.
ಪಕ್ಷದಲ್ಲಿ ಆಗ್ತಿರುವ ರಾದ್ದಾಂತವನ್ನು ಸಹಿಸಿಕೊಳ್ಳೋಕೆ ಆಗಲ್ಲ
ಬಿಜೆಪಿಯ ಬಣಗಳನ್ನು ಎರೆಹುಳು ನಾಗರಹಾವುಗಳಿಗೆ ಹೋಲಿಸಿ ಆಕ್ರೋಶ ಹೊರಹಾಕಿದ ಡಿವಿಎಸ್, ಬಿಜೆಪಿಯಲ್ಲಿ ಆಂತರಿಕ ಜಗಳವೇ ಆಯ್ತು, ಇವರಿಂದ ಸರ್ಕಾರವನ್ನು ಏನು ಮಾಡೋಕೆ ಸಾಧ್ಯವಿಲ್ಲ ಎಂದು ಜನರು ಮಾತಾಡ್ತಿದ್ದಾರೆ. ಹೀಗೇ ಬಿಜೆಪಿಗೆ ದೊಡ್ಡ ಹಾನಿಯಾಗ್ತಿದೆ.ಇಷ್ಟೆಲ್ಲಾ ಪಕ್ಷದಲ್ಲಿ ಆಗ್ತಿರುವ ರಾದ್ದಾಂತವನ್ನು ಸಹಿಸಿಕೊಳ್ಳೋಕೆ ಆಗಲ್ಲ. ಅದಕ್ಕಾಗಿ ಇನ್ನೊಮ್ಮೆ ನಾನು ದೆಹಲಿಗೆ ಹೋಗುವ ನಿರ್ಧಾರ ಮಾಡಿದ್ದೇನೆ ಎಂದರು.
ಚಿನ್ನದ ಬಟ್ಟಲುಗಳಲ್ಲಿ ಕಾಂಗ್ರೆಸ್ ವಿಷಯಗಳನ್ನು ಕೊಡ್ತಿದೆ, ನಮ್ಮವರಿಗೆ ತಗೊಳ್ಳೋಕೆ ಆಗ್ತಿಲ್ಲ
ಡಿಸೆಂಬರ್ 3 ರಂದು ಕೋರ್ ಕಮಿಟಿ ಸಭೆ ಇದೆ. ಅಲ್ಲಿ ಇದರ ಬಗ್ಗೆ ಚರ್ಚಿಸಿ, ಇದಕ್ಕೆಲ್ಲ ಬ್ರೇಕ್ ಹಾಕುವಂತೆ ಹೈಕಮಾಂಡ್ ಗೆ ಒತ್ತಾಯ ಮಾಡುತ್ತೇವೆ. ಕಾಂಗ್ರೆಸ್ ನವರು ಚಿನ್ನದ ಬಟ್ಟಲುಗಳಿಂದ ವಿಷಯಗಳನ್ನು ಕೊಡ್ತಿದ್ರು ಅದನ್ನು ನಮ್ಮವರು ತಗೊಳ್ಳೋಕೆ ಆಗ್ತಿಲ್ಲ. ಪಕ್ಷದಲ್ಲಿ ಎರೆಹುಳುಗಳು ನಾಗರಹಾವುಗಳಾಗ್ತಿದ್ದಾರೆ ಎಂದು ಡಿವಿಎಸ್ ಕಿಡಿಕಾರಿದರು.
ಹೈಕಮಾಂಡ್ ಕೂಡಲೇ ಮಧ್ಯಪ್ರವೇಶ ಮಾಡಬೇಕು
ನಾವು ಹಿರಿಯರು ಸೇರಿಕೊಂಡು ಒಂದು ಸಭೆ ಕರೆಯಬೇಕು. ಎರಡೂ ಗುಂಪುಗಳನ್ನು ಕರೆದು ಮಾತಾಡಬೇಕು ಅಂತ ನಮ್ಮಮನಸಲ್ಲಿತ್ತು. ಆದರೆ ಅವರು ಯಾವಾಗ ಬೀದಿಗೆ ಇಳಿದರೋ ಆಗ ಇದು ನಮ್ಮ ಕೈಯಲ್ಲಿ ಆಗದ ಕೆಲಸ ಅಂತ ಗೊತ್ತಾಯ್ತು. ಹೈಕಮಾಂಡ್ ಕೂಡಲೇ ಮಧ್ಯಪ್ರವೇಶ ಮಾಡಬೇಕು. ಅಶಿಸ್ತು ತೋರಿದ ಯಾರೇ ಆಗಲಿ ಶಿಸ್ತು ಕ್ರಮ ತಗೋಬೇಕು ಎಂದು ಡಿವಿಎಸ್ ಹೈಕಮಾಂಡ್ಗೆ ಮನವಿ ಮಾಡಿದರು.






