
ಇತ್ತೀಚಿನ ದಿನಗಳಲ್ಲಿ ವಯಸ್ಸಿಗೆ ಸಂಬಂಧವಿಲ್ಲದಂತೆ ಎಲ್ಲರಲ್ಲೂ ಹೃದಯದ ಸಮಸ್ಯೆಗಳು ಕಂಡುಬರುತ್ತಿವೆ. ಕರ್ನಾಟಕದಲ್ಲೂ ಮಕ್ಕಳಲ್ಲಿ ಹೃದಯಾಘಾತ ಪ್ರಕರಣಗಳು (Heart attack) ಹೆಚ್ಚಾಗುತ್ತಿವೆ. ಈ ನಡುವೆ ತೆಲಂಗಾಣ ರಾಜ್ಯದ ಮಂಚಿರ್ಯಾಲ ಜಿಲ್ಲೆಯ ಜನ್ನಾರಂ ಮಂಡಲದ ರೊಟಿಗೂಡ ಗ್ರಾಮದಲ್ಲಿ 10 ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿದ ಮೃತಪಟ್ಟಿರುವುದು ನಡೆದಿದೆ.
ಸಮನ್ವಿತಾ ಮೃತ (10) ಬಾಲಕಿ. ನಾಲ್ಕನೇ ತರಗತಿ ಓದುತ್ತಿದ್ದ ಬಾಲಕಿ, ಎಂದಿನಂತೆ ಬೆಳಗ್ಗೆ ಶಾಲೆಗೆ ಹೋಗಲು ತಯಾರಾಗುತ್ತಿದ್ದ ವೇಳೆ ಏಕಾಏಕಿ ಕುಸಿದುಬಿದ್ದಿದ್ದಾಳೆ. ಹೀಗಾಗಿ ತಂದೆ ನಾಗರಾಜು ಅವರು ತಕ್ಷಣ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಬಾಲಕಿ ಸಮನ್ವಿತಾ, ಲಕ್ಷೆಟ್ಟಿಪೇಟದ ಕೃಷ್ಣವೇಣಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದಳು.
ಎರಡು ವಾರಗಳ ಹಿಂದೆ ಇದೇ ಜಿಲ್ಲೆಯ ಚೆನ್ನೂರು ಪಟ್ಟಣದ ಪದ್ಮನಗರ್ ಕಾಲೋನಿಯಲ್ಲಿ 12 ವರ್ಷದ ಕಸ್ತೂರಿ ನಿವೃತಿ ಎಂಬ ಬಾಲಕಿ ಕೂಡ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಳು. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಬಾಲಕಿ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ.






