ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿರುವ ಪಡ್ಡಾಯೂರು ಪಟ್ಟೆ ರಸ್ತೆ ೪೦ ವರ್ಷ ಕಳೆದರೂ ಇನ್ನೂ ಕಾಂಕ್ರೀಟ್ ಆಗಿಲ್ಲ, ಇಲ್ಲಿನ ನಗರಸಭಾ ಸದಸ್ಯರಿಗೆ ಈ ವಿಚಾರ ಗೊತ್ತಾಗಲಿಲ್ಲವೇ? ಇಲ್ಲಿನವರು ಒಂದೇ ಪಕ್ಷವನ್ನು ಬೆಂಬಲಿಸಿದ್ದರಿಂದ ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿದೆ, ಇನ್ನು ಶಾಸಕ ಅಶೋಕ್ ರಐ ಅವರು ಈ ಭಾಗದ ರಸ್ತೆಗೆ ಅನುದಾನ ನೀಡುತ್ತಾರೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರಭಟ್ ಹೇಳಿದರು.
ನಗರಸಭಾ ವ್ಯಾಪ್ತಿಯ ಪಡ್ಡಾಯೂರು -ಪಟ್ಟೆ ನೂತನ ರಸ್ತೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯಾರೇ ಆಗಲಿ ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ವೋಟು ಹಾಕಿದವರನ್ನು ಜನಪ್ರತಿನಿಧಿಗಳು ಮರೆಯಬಾರದು, ಅವರ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಇರಬೇಕು. ೪೦ ವರ್ಷಗಳಿಂದ ಇಲ್ಲಿನ ಜನ ಕಷ್ಟಪಡುತ್ತಿದ್ದರೂ ಜನಪ್ರತಿನಿಧಿಗಳ ಗಮನಕ್ಕೆ ಬಾರದೇ ಇದ್ದದ್ದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು.
ನೂತನ ರಸ್ತೆಯನ್ನು ಉದ್ಘಾಟಿಸಿದ ಪುತ್ತೂರು ಶಾಸಕ ಅಶೋಕ್ ರೈ ಮಾತನಾಡಿ ಹಂತಹಂತವಾಗಿ ನಗರಸಭಾ ವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ದಿ ಮಾಡಲಾಗುವುದು. ನಗರಸಭಾ ವ್ಯಾಪ್ತಿಯೊಳಗೇ ಅನೇಕ ರಸ್ತೆಗಳು ಇನ್ನೂ ಕಾಂಕ್ರೀಟ್ ಕಂಡಿಲ್ಲ. ಜನರು ಬೇಡಿಕೆ ಇಟ್ಟರೂ ಜನಪ್ರತಿನಿಧಿಗಳು ಅದನ್ನು ಕಡೆಗಣಿಸುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆಯ ಸಮಸ್ಯೆ ತೀವ್ರವಾಗುತ್ತದೆ . ಪಡ್ಡಾಯೂರು ಭಾಗಕ್ಕೆ ಹೆಚ್ಚಿನ ಅನುದಾನ ಮೀಸಲಿಟ್ಟಿದ್ದೇವೆ, ಈಗಾಗಲೇ ಈ ಭಾಗಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಕಾರ್ಯಕ್ರಮದಲ್ಲಿ ಭರತ್ಕುಮಾರ್ ಆರಿಗ ಪಟ್ಟೆಗುತ್ತು, ಪಂಜಿಗುಡ್ಡೆ ಈಶ್ವರಭಟ್, ಲೋಕೇಶ್ ಗೌಡ ಪಡ್ಡಾಯೂರು, ರಾಜೇಶ್ ಗೌಡ ಪಟ್ಟೆ, ವಿನೋದ್ ಗೌಡ ಪಟ್ಟೆ, ಗಣೇಶ್ ಗೌಡ ಪಟ್ಟೆ, ತೇಜರಾಜ್ ಪಟ್ಟೆ, ಜಯರಾಜ ಪಟ್ಟೆ, ಗಣೇಶ್ ಗೌಡ ಪಡ್ಡಾಯೂರು, ರಾಜಾ ಪಡ್ಡಾಯೂರು, ಪ್ರಮೋದ್ ಪಡ್ಡಾಯೂರು, ವಸಂತ ಭಂಡಾರಿ ಪಟ್ಟೆ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.