
ಯಾವುದೇ ಇಸ್ಲಾಮೇತರ ಸದಸ್ಯರು ವಕ್ಫ್ನ ಭಾಗವಾಗುವುದಿಲ್ಲ. ಧಾರ್ಮಿಕ ಸಂಸ್ಥೆಯನ್ನು ನಿರ್ವಹಿಸಲು ಮುಸ್ಲಿಮೇತರರನ್ನು ನೇಮಿಸಲು ಯಾವುದೇ ನಿಬಂಧನೆ ಇಲ್ಲ ಅಥವಾ ಅಂತಹ ಯಾವುದೇ ವಿಚಾರವನ್ನು ಪರಿಚಯಿಸುವ ಉದ್ದೇಶವೂ ಇಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ ಅವರು ಸ್ಪಷ್ಟಪಡಿಸಿದರು.
ವಿಪಕ್ಷಗಳಿಂದ ಭಾರೀ ವಿರೋಧದ ನಡುವೆಯೇ ಇಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗಿದ್ದು, ಈ ಮೇಲಿನ ಚರ್ಚೆಗೆ ಅಮಿತ್ ಶಾ ಮಾತನಾಡಿ, ಈ ಕಾಯ್ದೆಯು ನಮ್ಮ ಮುಸ್ಲಿಂ ಸಹೋದರರ ಧಾರ್ಮಿಕ ಆಚರಣೆಗಳು ಮತ್ತು ಅವರು ದಾನ ಮಾಡಿದ ಆಸ್ತಿಯಲ್ಲಿ ಹಸ್ತಕ್ಷೇಪ ಮಾಡುವ ಗುರಿಯನ್ನು ಹೊಂದಿದೆ ಎಂಬ ವದಂತಿಯನ್ನು ವಿಪಕ್ಷಗಳಿಂದ ಹರಡಲಾಗುತ್ತಿದೆ. ಅಲ್ಪಸಂಖ್ಯಾತರನ್ನು ಬೆದರಿಸಲು ಹೀಗೆ ಮಾಡಲಾಗುತ್ತಿದೆ. ವಿಪಕ್ಷಗಳು ಈ ಮಸೂದೆ ಬಗ್ಗೆ ತಪ್ಪು ವದಂತಿ ಹರಡಿಸುಸುತ್ತಿವೆ ಎಂದು ವಿಪಕ್ಷಗಳ ವಿರುದ್ಧ ಶಾ ಗುಡುಗಿದರು.
ಯುಪಿಎ ಸರ್ಕಾರದಲ್ಲಿ ವಕ್ಫ್ ಬೋರ್ಡ್ಗೆ ಆಸ್ತಿ ಕೊಟ್ಟಿದೆ. ಎಲ್ಲಾ ರಾಜ್ಯಗಳಲ್ಲೂ ವಕ್ಫ್ ಸರ್ಕಾರಿ ಆಸ್ತಿ ಕಬಳಿಸಲಾಗಿದೆ. ಭ್ರಷ್ಟಾಚಾರಿಗಳ ವಿರುದ್ಧ ನಮ್ಮ ಕಾರ್ಯಾಚರಣೆಯಾಗಿದೆ ಎಂದು ವಕ್ಫ್ ತಿದ್ದುಪಡಿ ಮಸೂದೆಯನ್ನು ಸಮರ್ಥಿಸಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕಾಂಗ್ರೆಸ್ನಂತೆ ವೋಟ್ ಬ್ಯಾಂಕ್ಗಾಗಿ ಕೆಲಸ ಮಾಡಲ್ಲ, ಬದಲಾಗಿ ದೇಶದ ಜನರ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತದೆ ಎಂದರು.






