
ಪುತ್ತೂರು: ಬೆಳೆ ವಿಮೆ ಪರಿಹಾರ ಮೊತ್ತವನ್ನು ಶೇ.20ಕ್ಕೆ ಏರಿಸಬೇಕು ಮತ್ತು ಶೂನ್ಯ ಬಡ್ಡಿ ದರದಲ್ಲಿ ಸಾಲ, ಯಶಸ್ವಿನಿ ಸೌಲಭ್ಯದ ಕುರಿತು ಅಧಿವೇಶನದಲ್ಲಿ ಪ್ರಸ್ತಾಪ ಮಾಡುವಂತೆ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿ ಮಾಡಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಕೊಳೆರೋಗ ಬಂದಿದ್ದು ಅಪಾರ ನಷ್ಟ ಸಂಭವಿಸಿದೆ. ಅಡಿಕೆ ಮರವು ಹೋಗಿದೆ. ಕಳೆದ ವರ್ಷ ಶೇ.60 ಬೆಳೆ ಹಾಳಾಗಿದೆ. ಈ ವರ್ಷ ಶೇ.70 ಕೊಳೆ ರೋಗ ಮತ್ತು ಶೇ. 20 ಅಡಿಕೆ ಮರವೂ ಹೋಗಿದೆ. ಇದರಿಂದ ದಕ್ಷಿಣ ಕನ್ನಡದಲ್ಲಿ ಆರ್ಥಿಕತೆಗೆ ಸಮಸ್ಯೆ ಉಂಟಾಗಿದೆ. ಕಳೆದ ವರ್ಷ ಶೇ.10ರಷ್ಟು ಬೆಳೆ ವಿಮೆ ಬಂದಿದೆ. ಈ ವರ್ಷ ಅದನ್ನು ಶೇ.20ಕ್ಕೆ ಹೆಚ್ಚಿಸುವಂತೆ ಸರಕಾರವನ್ನು ಒತ್ತಾಯಿಸಬೇಕು. ಪುತ್ತೂರು ಸರಕಾರಿ ಆಸತ್ರೆಗೆ ಯಶಸ್ವಿನಿ ಸವಲತ್ತು ನೀಡಬೇಕು. ಜೊತೆಗೆ ಕಳೆದ ಬಜೆಟ್ನಲ್ಲಿ ಪ್ರಸ್ತಾಪಿಸಿದಂತೆ ರೂ.5ಲಕ್ಷ ತನಕ ಶೂನ್ಯ ಬಡ್ಡಿದರದ ಸಾಲ ನೀಡುವ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸಬೇಕೆಂದು ಪಂಜಿಗುಡ್ಡೆ ಈಶ್ವರ ಭಟ್ ಅವರು ಮನವಿಯಲ್ಲಿ ತಿಳಿಸಿದರು. ಈ ಸಂದರ್ಭಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ವಿನಯಸುವರ್ಣ, ದಿನೇಶ್ ಪಿ.ವಿ. ಮತ್ತಿತರರು ಉಪಸ್ಥಿತರಿದ್ದರು






