ಪುತ್ತೂರು: ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕರ ದಿನಾಚರಣೆ ‘ಶಿಂಟೂರು ಸ್ಮೃತಿ-2025’ ಕಾರ್ಯಕ್ರಮ ಆ.14ರಂದು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದ ಶೀಂಟೂರು ನಾರಾಯಣ ರೈ ವೇದಿಕೆಯಲ್ಲಿ ನಡೆಯಲಿದೆ ಎಂದು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ತಿಳಿಸಿದರು.

ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ‘‍ಶೀಂಟೂರು ಸನ್ಮಾನ’, ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ ನಡೆಯಲಿದೆ ಎಂದರು.

‘ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ನನ್ನ ತಂದೆ ದಿ.ಶೀಂಟೂರು ನಾರಾಯಣ ರೈ ಅವರು 2ನೇ ಮಹಾಯುದ್ಧದಲ್ಲಿ ಭಾರತೀಯ ಸೇನಾನಿಯಾಗಿ ಬರ್ಮಾದಲ್ಲಿ ಕರ್ತವ್ಯ ನಿರ್ವಸಿದ್ದರು. ಸೇನಾ ನಿವೃತ್ತಿಯ ಬಳಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಸಹಕಾರ ಕ್ಷೇತ್ರದಲ್ಲೂ ಹೆಸರು ಮಾಡಿದ್ದರು. ಅವರ ಪ್ರೇರಣೆಯಿಂದ ನಾನು 2001ರಲ್ಲಿ ವಿದ್ಯಾಗಂಗೋತ್ರಿಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದು, ಸಂಸ್ಥೆಯು ನಿರಂತರವಾಗಿ ಉತ್ತಮ ಫಲಿತಾಂಶ ಮತ್ತು ಸರ್ವತೋಮುಖ ಸಾಧನೆಗಳೊಂದಿಗೆ ಮುಂದುವರಿಯುತ್ತಿದೆ. ಸಂಸ್ಥಾಪಕರ ದಿನಾಚರಣೆಯನ್ನು ‘ಶೀಂಟೂರು ಸ್ಮೃತಿ’ ಹೆಸರಿನಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.

14ನೇ ವರ್ಷದ ಸ್ಥಾಪಕರ ದಿನಾಚರಣೆ ‘ಶೀಂಟೂರು ಸ್ಮೃತಿ’ ಕಾರ್ಯಕ್ರಮ ಆ.14ರಂದು ಬೆಳಿಗ್ಗೆ 10ಕ್ಕೆ ಆರಂಭಗೊಳ್ಳಲಿದೆ. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎ.ಆರ್. ಉದ್ಘಾಟಿಸುವರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಅಧ್ಯಕ್ಷತೆ ವಹಿಸುವರು. ಇತ್ತೀಚೆಗೆ ನಿವೃತ್ತರಾದ ಬಂಟ್ವಾಳದ ಕರ್ನಲ್ ರಾಜೇಶ್ ಹೊಳ್ಳ ಎಸ್.ಎಂ. ಅವರಿಗೆ ಶೀಂಟೂರು ಸನ್ಮಾನ ಪ್ರದಾನ ಮಾಡಲಾಗುವುದು. ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಅವರು ಸನ್ಮಾನಿಸುವರು. ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಸೂಂತೋಡು ಹೂವಯ್ಯ ಸುಳ್ಯ ಅವರು ಶೀಂಟೂರು ಸಂಸ್ಮರಣೆ ಉಪನ್ಯಾಸ ಮಾಡುವರು. ಸವಣೂರು ಎಸ್.ಎನ್.ಆರ್.ರೂರಲ್ ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿ ಎನ್.ಸುಂದರ ರೈ ನಡುಮನೆ ಅತಿಥಿಯಾಗಿ ಭಾಗವಹಿಸುವರು ಎಂದರು.

ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಯ 10 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ₹ 5 ಸಾವಿರದಂತೆ ಶಿಷ್ಯವೇತನ ನೀಡಲಾಗುತ್ತಿದೆ. ಈ ವರ್ಷ ತೃತೀಯ ಬಿಕಾಂ ವಿದ್ಯಾರ್ಥಿನಿ ಧನ್ಯಶ್ರೀ ಬಿ.ಡಿ,, ತೃತೀಯ ಬಿಎ ವಿದ್ಯಾರ್ಥಿ ದೀಕ್ಷಿತ್ ಜಿ., ತೃತೀಯ ಬಿಸಿಎ ವಿದ್ಯಾರ್ಥಿ ಪವನ್ ಎಚ್.ಎಸ್., ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ಶ್ರೀರಕ್ಷ ಪಿ., ವಾಣಿಜ್ಯ ವಿಭಾಗದ ಪ್ರತೀಕ್ಷ ಪಿ., 10ನೇ ತರಗತಿಯ ಶಝಾ ಫಾತಿಮ, 8ನೇ ತರಗತಿಯ ಎನ್.ಆರ್.ಇಫಾ, 7ನೇ ತರಗತಿಯ ವಂದನ್ ರೈ ಸಿ., 5ನೇ ತರಗತಿಯ ದಿವಿತ್, ಯುಕೆಜಿಯ ಅಝ ಫಾತಿಮ ಶಿಷ್ಯವೇತನ ನೀಡಲಾಗುವುದು ಎಂದರು.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ, ವಕೀಲ ಅಶ್ವಿನ್ ಎಲ್.ಶೆಟ್ಟಿ, ಸವಣೂರು ಎಸ್.ಎನ್.ಆರ್.ರೂರಲ್ ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿಗಳಾದ ಎನ್.ಸುಂದರ ರೈ ನಡುಮನೆ, ರಶ್ಮಿ ಅಶ್ವಿನ್ ಶೆಟ್ಟಿ ಸವಣೂರು, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್.ಆಳ್ವ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಶೀಂಟೂರು ಪ್ರತಿಷ್ಠಾನವು ‘ಶೀಂಟೂರು ನಾರಾಯಣ ರೈ ಶಿಕ್ಷಣ ಪ್ರತಿಷ್ಠಾನ ಸವಣೂರು’ ವಿದ್ಯಾಸಂಸ್ಥೆಯ ದಶಮಾನೋತ್ಸವ ಆಚರಣೆ ವೇಳೆ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ವಿನಯ ಹೆಗ್ಡೆ ಅವರು ಪ್ರಸ್ತಾಪಿಸಿದ್ದ ಯೋಜನೆಯಾಗಿದೆ. ಆ ಸಂದರ್ಭದಲ್ಲಿ ಎ.ಜೆ ಆಸ್ಪತ್ರೆಯ ಸಂಸ್ಥಾಪಕ ಎ.ಜೆ.ಶೆಟ್ಟಿ ಅವರು ₹ 10ಲಕ್ಷ ದೇಣಿಗೆ ನೀಡಿದ್ದರು. ವಿನಯ ಹೆಗ್ಡೆ ಅವರು ₹ 2ಲಕ್ಷ ನೀಡಿದ್ದರು. ಹಲವು ಗಣ್ಯರ ದೇಣಿಗೆಯಿಂದಾಗಿ ಪ್ರತಿಷ್ಠಾನದಲ್ಲಿ ₹ 39 ಲಕ್ಷ ನಿಧಿ ಇದ್ದು, ಇದರಿಂದ ಬರುವ ಬಡ್ಡಿಯ ಹಣದಲ್ಲಿ ಪ್ರತಿಭಾವಂತ ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಶೀಂಟೂರು ಸ್ಮೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಕೆ.ಸೀತಾರಾಮ ರೈ ತಿಳಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!