
ರಾಜ್ಯದಲ್ಲಿ ಬಿಸಿಲಿನ ತಾಪ ಏರುತ್ತಿರುವ ಬೆನ್ನಲ್ಲೇ, ಹವಾಮಾನ ಇಲಾಖೆಯು ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ತಂಪಾದ ಸಿಹಿಸುದ್ದಿ ನೀಡಿದೆ. ಶ್ರೀಲಂಕಾ ಬಳಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಪ್ರಸ್ತುತ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಶ್ರೀಲಂಕಾದತ್ತ ಸಾಗುತ್ತಿದ್ದು, ಇಂದು ಅದು ‘ತೀವ್ರ ವಾಯುಭಾರ ಕುಸಿತ’ವಾಗಿ (Depression) ಬಲಗೊಳ್ಳಲಿದೆ. ಈ ನಡುವೆ, ಫೆಬ್ರವರಿ 21 (ಶನಿವಾರ) ರಂದು ಮತ್ತೊಂದು ವಾಯುಭಾರ ಕುಸಿತ ಉಂಟಾಗಲಿದ್ದು, ಇದು ಫೆಬ್ರವರಿ 23ರ ವೇಳೆಗೆ ಶ್ರೀಲಂಕಾ ಕರಾವಳಿಯತ್ತ ಚಲಿಸಲಿದೆ ಎಂದು ಹವಾಮಾನ ಮಾದರಿಗಳು ಸೂಚಿಸಿವೆ.
ದಕ್ಷಿಣ ಕನ್ನಡ , ಉಡುಪಿ (ಕರಾವಳಿ) ಮತ್ತು ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 2-3 ದಿನಗಳ ಕಾಲ ಹಗುರ ಮಳೆಯಾಗುವ ಸಾಧ್ಯತೆಯಿದೆ.ಶ್ರೀಲಂಕಾ ಆಗ್ನೇಯ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ (Low Pressure) ಪಶ್ಚಿಮಕ್ಕೆ ಚಲಿಸುತ್ತಿರುವುದರಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.







