ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ನೂತನವಾಗಿ ನಿರ್ಮಿಸಲಾದ ಮುಖಗೋಪುರವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ಅವರು ಲೋಕಾರ್ಪಣೆಗೊಳಿಸಿದರು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲರು, ದೇವಾಲಯಗಳು ನಮ್ಮ ಸಂಸ್ಕೃತಿಯ ಕೇಂದ್ರಗಳು. ಸತ್ಯ, ಧರ್ಮ ಮತ್ತು ಸೇವೆಯ ಪ್ರತಿರೂಪವಾಗಿವೆ. ಐತಿಹಾಸಿಕ ಹಿನ್ನೆಲೆಯ ಹನುಮಗಿರಿ ಕ್ಷೇತ್ರವು ಭಕ್ತರಲ್ಲಿ ಸಂಸ್ಕೃತಿ, ದೇಶಪ್ರೇಮ, ವಿವೇಕ ಮತ್ತು ಸಮರ್ಪಣಾಭಾವವನ್ನು ವೃದ್ಧಿಸಲಿ ಎಂದು ಶುಭಹಾರೈಸಿದರು.
ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ದೇವಭಕ್ತಿ ಮತ್ತು ದೇಶಭಕ್ತಿ ಹನುಮಗಿರಿ ಕ್ಷೇತ್ರದಲ್ಲಿ ಒಂದಾಗಿ ಮೇಲೈಸಿವೆ ಎಂದು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಪ್ರಸ್ತಾವನೆಗೈದರು. ನಳಿನ್ ಕುಮಾರ್ ಕಟೀಲ್,ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಸಿ. ನಾರಾಯಣ ರೆಂಜ, ಶಾಸಕ ಅಶೋಕ್ ಕುಮಾರ್ ರೈ ರಾಜ್ಯಪಾಲರನ್ನು ಗೌರವಿಸಿದರು. ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಮತ್ತು ಕ್ಷೇತ್ರದ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಉಪಸ್ಥಿತರಿದ್ದರು.














