ಪುತ್ತೂರು: ಈ ಬಾರಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ಜರುಗಿದ್ದು, ಇದುವರೆಗೆ ಕಂಡಿಲ್ಲದಷ್ಟು ಅದ್ದೂರಿಯಾಗಿ ನಡೆದಿದೆ ಎಂದು ಆದರ್ಶ ಆಸ್ಪತ್ರೆಯ ವೈದ್ಯರು ಹಾಗೂ ಹಿಂದು ಮುಖಂಡರಾದ ಡಾ. ಎಂ.ಕೆ. ಪ್ರಸಾದ್ ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿಗೆ ಪತ್ರ ಬರೆದಿರುವ ಅವರು, ಜಾತ್ರೆಯ ಎಲ್ಲಾ ಕಾರ್ಯಕ್ರಮಗಳು ಶಿಸ್ತುಬದ್ಧವಾಗಿ ಹಾಗೂ ಭಕ್ತಿಭಾವದಿಂದ ನೆರವೇರಿದವು ಎಂದು ತಿಳಿಸಿದ್ದಾರೆ. ಭಕ್ತರಿಗೆ ಸಮರ್ಪಕವಾಗಿ ಊಟ, ಕಾಫಿ ಮತ್ತು ತಿಂಡಿ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ತೃಪ್ತಿಯಿಂದ ಸೇವಿಸಿದರು ಎಂದು ಪ್ರಶಂಸಿಸಿದ್ದಾರೆ.
“ಯಾವಾಗಲೂ ಇದೇ ರೀತಿಯಲ್ಲಿ ನೀವು ಆಡಳಿತ ನಡೆಸಿದರೆ ದೇವಸ್ಥಾನದ ಗೌರವ ಇನ್ನಷ್ಟು ಹೆಚ್ಚುತ್ತದೆ. ದೇವರು ನಿಮಗೆ ಸಂಪೂರ್ಣ ಆಶೀರ್ವಾದ ನೀಡಲಿ” ಎಂದು ಅವರು ಪತ್ರದಲ್ಲಿ ಹಾರೈಸಿದ್ದಾರೆ.














