ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನೇಜಾರು ಜ್ಯೋತಿ ನಗರದ ಸಮೀಪ ಶುಕ್ರವಾರ ಸಂಭವಿಸಿದೆ.
ನೇಜಾರು ಆದರ್ಶನಗರದ ಇನಾಯತುಲ್ಲಾ ಎಫ್.ಎಂ. ಮತ್ತು ಮುಸರ್ರಥ್ ದಂಪತಿಯ ಪುತ್ರ ಅಬ್ದುಲ್ ರೆಹಮಾನ್ (12) ಮೃತಪಟ್ಟ ಬಾಲಕ.ಈತ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ.
ಹೂಡೆ ಸಾಲಿಹಾತ್ ಪಿ.ಯು. ಕಾಲೇಜಿನ ಪ್ರಾಧ್ಯಾಪಕಿ ಮುಸರ್ರಥ್, ತನ್ನ ಇಬ್ಬರು ಮಕ್ಕಳೊಂದಿಗೆ ಶಾಲೆಯಿಂದ ಪುಸ್ತಕ ತೆಗೆದುಕೊಂಡು ಮನೆಗೆ ಬರುತ್ತಿದ್ದಾಗ ನೇಜಾರು ಆಯಿಷಾ ಮಸೀದಿ ಬಳಿ ಅಬ್ದುಲ್ ರೆಹಮಾನ್ ಇಳಿದಿದ್ದ ಎನ್ನಲಾಗಿದೆ. ಅಲ್ಲಿ ರಸ್ತೆ ದಾಟುತ್ತಿದ್ದ ಅಬ್ದುಲ್ ರೆಹಮಾನ್ಗೆ ಸಂತೆಕಟ್ಟೆಯಿಂದ ಕೆಮ್ಮಣ್ಣು ಕಡೆಗೆ ಹೋಗುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ರಸ್ತೆಗೆ ಎಸೆಯಲ್ಪಟ್ಟು ಆತನ ತಲೆಯ ಹಿಂಬದಿ ಮತ್ತು ಬಲಕಾಲಿಗೆ ಗಂಭೀರ ಗಾಯಗೊಂಡಿದ್ದು, ತತ್ಕ್ಷಣ ರೆಹಮಾನ್ನನ್ನು ಉಡುಪಿ ಆಸ್ಪತ್ರೆಗೆ ಸಾಗಿಸಲಾಗಿದ್ದರೂ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ. ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಆತನಿಗೆ ಇತ್ತಿಚೇಗೆ ಶಾಲೆಯಲ್ಲಿ ನಡೆಸಿದ ಬೇಸಗೆ ಶಿಬಿರದ ಧಾರ್ಮಿಕ ಪಠಣದಲ್ಲಿ ಸೈಕಲ್ ಬಹುಮಾನವಾಗಿ ದೊರೆತಿದೆ.
ಘಟನೆಗೆ ಸಂಬಂಧಿಸಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














