ಡಂಬುಲ್ಲಾ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಹಾಗೂ ಶ್ರೀಲಂಕಾ ಎ ತಂಡಗಳ ನಡುವಿನ ತ್ರಿಕೋನ ಸರಣಿಯ ನಾಲ್ಕನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡು ಸೂಪರ್ ಓವರ್ ನಡೆಯಿತು. ಈ ರೋಚಕ ಪಂದ್ಯದಲ್ಲಿ ಶ್ರೀಲಂಕಾ ಎ ತಂಡ ಗೆದ್ದುಬೀಗಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.2 ಓವರ್ಗಳಲ್ಲಿ 265 ರನ್ಗಳಿಗೆ ಆಲ್ಔಟ್ ಆಗಿ ಭಾರತ ತಂಡಕ್ಕೆ 266 ರನ್ಗಳ ಗುರಿಯನ್ನು ನೀಡಿತು.
ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಶ್ರೀಲಂಕಾ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು. ಈ ಮೂಲಕ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.
ಈ ಸಮಯಕ್ಕಾಗಲೇ ಕೆಟ್ಟ ಬೆಳಕು ಮೈದಾನವನ್ನು ಆವರಿಸಿದ್ದ ಕಾರಣ ಶ್ರೀಲಂಕಾ ಆಟಗಾರರು ಹಾಗೂ ಅಂಪೈರ್ಗಳು ಸೂಪರ್ ಓವರ್ ಅಸಾಧ್ಯ ಎಂದು ಕೈಕುಲುಕಿ ಪೆವಿಲಿಯನ್ನತ್ತ ತೆರಳಲು ಸಜ್ಜಾಗಿದ್ದರು. ಆದರೆ ಭಾರತ ತಂಡದ ಆಟಗಾರರು ಮಾತ್ರ ಸೂಪರ್ ಓವರ್ ಬೇಕೇಬೇಕು ಎಂದು ಪಟ್ಟುಹಿಡಿದರು.
ಅದರಲ್ಲೂ ಭಾರತ ತಂಡದ ನಾಯಕ ತಿಲಕ್ ವರ್ಮಾ ಮೈದಾನಲ್ಲೇ ಇದೆಂಥ ಕೆಟ್ಟ ನಡೆ ಎಂದು ಕಿಡಿಕಾರಿ ಸೂಪರ್ ಓವರ್ ಆಡಿಸಲೇಬೇಕು ಎಂದು ಪಟ್ಟುಹಿಡಿದರು. ಅಂಪೈರ್ ಮಂದ ಬೆಳಕಿನ ಕಾರಣ ನೀಡಿದರೂ ಕೇಳದ ತಿಲಕ್ ವರ್ಮಾ ಹಠ ಮಾಡಿ ಸೂಪರ್ ಓವರ್ ಆಡುವಂತೆ ಮಾಡಿದರು.
ಇದಕ್ಕೆ ಮಣಿದು ಸೂಪರ್ ಓವರ್ ನಡೆಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 16 ರನ್ ಬಾರಿಸಿ ಭಾರತಕ್ಕೆ 17 ರನ್ಗಳ ಸವಾಲಿನ ಗುರಿಯನ್ನು ನೀಡಿತು. ಆದರೆ ಭಾರತ ಕೇವಲ 9 ರನ್ ಕಲೆಹಾಕಿ 7 ರನ್ಗಳ ಹೀನಾಯ ಸೋಲನ್ನು ಅನುಭವಿಸಿತು.
ಈ ಮೂಲಕ ಅಂಕಪಟ್ಟಿಯಲ್ಲಿ ಶ್ರೀಲಂಕಾ 3 ಪಂದ್ಯಗಳನ್ನಾಡಿ 4 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದು, ಭಾರತ 3 ಪಂದ್ಯಗಳನ್ನಾಡಿ ಕೇವಲ ಒಂದರಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಇನ್ನು ಎರಡು ಪಂದ್ಯಗಳನ್ನಾಡಿ ಒಂದರಲ್ಲಿ ಗೆದ್ದಿರುವ ಅಫ್ಘಾನಿಸ್ತಾನ ಮೂರನೇ ಸ್ಥಾನದಲ್ಲಿದೆ.
ಹೀಗೆ ಬೇಡವೆಂದರೂ ಸೂಪರ್ ಓವರ್ ಆಡುವಂತೆ ಮಾಡಿದ ತಿಲಕ್ ವರ್ಮಾ ಅತಿಯಾದ ವಿಶ್ವಾಸವನ್ನು ಕಂಡ ನೆಟ್ಟಿಗರು ಇಷ್ಟು ಕೊಬ್ಬು ಒಳ್ಳೆಯದಲ್ಲ ಎಂದು ಖಂಡಿಸಿದ್ದು, ಸುಮ್ಮನಿದ್ದಿದ್ದರೆ ಒಂದು ಅಂಕವಾದರೂ ಬರುತ್ತಿತ್ತಲ್ಲ ಎಂದು ಕಿಡಿಕಾರಿದ್ದಾರೆ. ಈ ಮೂಲಕ ಭಾರತಕ್ಕೆ ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೇ ಅಫ್ಘಾನಿಸ್ತಾನ ವಿರುದ್ಧ ಈಗಾಗಲೇ ಆಡಿದ ಒಂದು ಪಂದ್ಯ ಸೋತಿರುವ ಭಾರತ ಮುಂದಿನ ಪಂದ್ಯದಲ್ಲೂ ಸೋತರೆ ಫೈನಲ್ ಪ್ರವೇಶಿಸುವ ಅರ್ಹತೆ ಕಳೆದುಕೊಂಡು ಸರಣಿಯಿಂದ ಹೊರಬೀಳಲಿದೆ.







