
ರಾ ಜ್ಯದಲ್ಲಿ ಇದೀಗ ವಕ್ಫ್ ಬೋರ್ಡ್ ನೋಟಿಸ್ ಕೊಟ್ಟಿರುವ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕಾಂಗ್ರೆಸ್ – ಬಿಜೆಪಿ ನಡುವೆ ಈ ವಿಚಾರ ಇದೀಗ ವಾದ ವಿವಾದ ನಡೆಯುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೂಡ ವಕ್ಫ್ ರೈತರಿಗೆ ನೋಟಿಸ್ ಕೊಟ್ಟಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಮತ್ತೊಂದು ಕಡೆ ಮುಸ್ಲಿಮರ ತುಷ್ಟೀಕರಣಕ್ಕೆ ಕಾಂಗ್ರೆಸ್ ಮುಂದಾಗಿದ್ದು, ರೈತರ ಆಸ್ತಿ ಮಾತ್ರವಲ್ಲ, ದೇವಸ್ಥಾನದ ಆಸ್ತಿಗಳ ಮೇಲೂ ವಕ್ಫ್ ಕಣ್ಣಿಟ್ಟಿದ್ದರೂ ಸರ್ಕಾರ ಸುಮ್ಮನಿದೆ ಎಂದು ಆರೋಪಿಸಿದೆ.
ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಬೆನ್ನಲ್ಲೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಬಿಜೆಪಿ ಕಾರ್ಯಕರ್ತರ ಸಿಟ್ಟು ನೆತ್ತಿಗೇರುವಂತೆ ಮಾಡಿದೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಮುಸ್ಲಿಂ ಮುಖಂಡರನ್ನು ಉದ್ದೇಶಿಸಿ ಮಾಡಿದ್ದ ಭಾಷಣ ಇದೀಗ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಏನಿದೆ?
ಮುಸ್ಲಿಂ ಮುಖಂಡರು ಪಾಲ್ಗೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಬಸವರಾಜ ಬೊಮ್ಮಾಯಿ, 2,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಕ್ಫ್ ಆಸ್ತಿಯನ್ನು ಖಾಸಗಿಯವರು ವಶಪಡಿಸಿಕೊಂಡಿದ್ದಾರೆ. ಒಂದು ಒಂದು ಇಂಚು ಭೂಮಿಯನ್ನು ವಶಪಡಿಸಿಕೊಳ್ಳುವವರೆಗೂ ನೀವು ಕೂರಬೇಡಿ ಎಂದು ಸಿಎಂ ಆಗಿದ್ದ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಹೇಳಿದ್ದು, ಇದೀಗ ಕಾಂಗ್ರೆಸ್ಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.
ಈ ವಿಡಿಯೋವನ್ನು ಕಾಂಗ್ರೆಸ್ ಮುಖಂಡರು, ಬೆಂಬಲಿಗರು ಹಂಚಿಕೊಂಡಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲೇ ವಕ್ಫ್ ಬೋರ್ಡ್ ಸಾಕಷ್ಟು ರೈತರಿಗೆ ನೋಟಿಸ್ ಕೊಟ್ಟಿದೆ, ಆಗ ಸುಮ್ಮನಿದ್ದ ಬಿಜೆಪಿ, ಮುಖಂಡರು, ಬೆಂಬಲಿಗರಿಗೆ ಈಗ ಎಚ್ಚರವಾಗಿದೆ. ಈಗ ಹಿಂದೂಗಳ, ರೈತರ ಆಸ್ತಿ ಬಗ್ಗೆ ಕಾಳಜಿ ತೋರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬೊಮ್ಮಾಯಿ ವಿರುದ್ಧ ಆಕ್ರೋಶ
ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ವಿಡಿಯೋ ವೈರಲ್ ಆಗುತ್ತಿದ್ದಂತೆ, ಬಿಜೆಪಿ ನಾಯಕರು, ಕಾರ್ಯಕರ್ತರಿಗೆ ಮುಜುಗರ ಉಂಟಾಗಿದೆ. ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಪಕ್ಷದ ನಾಯಕರಿಗೆ ತಮ್ಮದೇ ಪಕ್ಷದ ನಾಯಕ, ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್ಗೆ ಇಂತಹ ಸೂಚನೆ ಕೊಟ್ಟಿರುವುದು ಇರಿಸು ಮುರಿಸು ಉಂಟಾಗುವಂತೆ ಮಾಡಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಬೊಮ್ಮಾಯಿ ವಿರುದ್ಧ ಹರಿಹಾಯ್ದಿದ್ದಾರೆ.
ನೀವು ಮಾಡಿರುವ ಕೆಲಸದಿಂದ ಇಂದು ಕಾಂಗ್ರೆಸ್ ವಿರುದ್ಧ ಮಾತನಾಡಲು ನಮಗೆ ಮುಖ ಇಲ್ಲದಂತಾಗಿದೆ. ಬಿಜೆಪಿಯ ಇಂದಿನ ಪರಿಸ್ಥಿತಿಗೆ ನಿಮ್ಮ ಕೊಡುಗೆ ಕೂಡ ಸಾಕಷ್ಟಿದೆ. ನಿಮ್ಮಿಂದಾಗಿ ನಾವು ಕಾಂಗ್ರೆಸ್ ವಿರುದ್ಧ ಮಾತನಾಡಲೂ ಆಗದಂತಾಗಿದೆ ಎಂದು ಸಿಟ್ಟಾಗಿದ್ದಾರೆ.
ಬಿಜೆಪಿ ಸರ್ಕಾರ ಇದ್ದಾಗಲೇ ಇಂತಹ ಹೇಳಿಕೆ ಕೊಟ್ಟು ಈಗ ಯಾವ ಮುಖ ಇಟ್ಟುಕೊಂಡು ವಕ್ಫ್ ವಿರುದ್ಧ ಮಾತನಾಡುತ್ತೀರಿ, ನಿಮ್ಮಂತಹವರಿಂದ ಪಕ್ಷ ಈಗ ಯಾವ ಸ್ಟ್ಯಾಂಡ್ ತೆಗೆದುಕೊಂಡರೂ ನಗೆಪಾಟಲಿಗೆ ಈಡಾಗುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.






