
ಪುತ್ತೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಹೊಸ ನಿಯಮದ ಪ್ರಕಾರ ಅಧಿಕೃತ ಕಟ್ಟಡ ಹಾಗೂ ಜಾಗಕ್ಕೆ ಎ ಖಾತೆ ಮತ್ತು ಅನಧಿಕೃತ ಕಟ್ಟಡ-ಸ್ಥಳಕ್ಕೆ ಬಿ ಖಾತೆ ನೀಡಲು ಅವಕಾಶ ಕಲ್ಪಿಸಿದೆ. ಈ ಮೂಲಕ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂಧಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಈ ಹೊಸ ನಿಯಮದಿಂದ ಮುಖ್ಯವಾಗಿ ಬಿ ಖಾತೆಯ ಸ್ಥಳಗಳನ್ನು ಮಾರಾಟ ಮಾಡುವ ಅವಕಾಶ ಸಿಗಲಿದೆ. ಬ್ಯಾಂಕ್ ನಿಂದ ಸಾಲ ಪಡೆಯಲು ಅವಕಾಶ ಇದೆ. ಜತೆಗೆ ನಿರಂತರವಾಗಿ ಎರಡುಪಟ್ಟು ತೆರಿಗೆಯ ಬದಲಿಗೆ ಏಕಕಾಲಕ್ಕೆ ಮಾತ್ರ ದುಪ್ಪಟ್ಟು ತೆರಿಗೆ ಪಾವತಿಸಲು ನಿಯಮದಲ್ಲಿ ಸರಳೀಕರಣ ಮಾಡಲಾಗಿದೆ ಎಂದು ನಗರಸಭೆಯ ಮಾಜಿ ಉಪಾಧ್ಯಕ್ಷ ಎಚ್.ಮಹಮ್ಮದ್ ಆಲಿ ಅವರು ತಿಳಿಸಿದರು.
ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಬಿ ಖಾತೆಯ ಸ್ಥಳವನ್ನು ಮಾರಾಟ ಮಾಡುವ ಅವಕಾಶ ಇದ್ದರೂ ಇದನ್ನು ಖರೀದಿ ಮಾಡುವವರಿಗೆ ಮನೆ ನಿರ್ಮಿಸಬೇಕಾದರೆ ಸಿಂಗಲ್ ಲೇಔಟ್ ವ್ಯವಸ್ಥೆ ಮಾಡಬೇಕಾಗುತ್ತದೆ. ಹಾಗಾಗಿ ಇಲ್ಲಿ ಒಂದಷ್ಟು ಗೊಂದಲ ಇದೆ. ಜನಸಾಮಾನ್ಯರು ಗೊಂದಲ ಮಾಡಿಕೊಳ್ಳದೆ ಸರಿಯಾದ ಮಾಹಿತಿ ಪಡೆದುಕೊಂಡ ಬಳಿಕವೇ ಇಂತಹ ಸ್ಥಳಗಳ ಖರೀದಿಗೆ ಮುಂದಾಗಬೇಕು. ಯಾಕೆಂದರೆ ಅನಧಿಕೃತ ಕಟ್ಟಡ ಮತ್ತು ಜಾಗ ಬಿ ಖಾತೆಯನ್ನು ಪಡೆದುಕೊಂಡ ತಕ್ಷಣ ಅದು `ಸಕ್ರಮ’ವಾಗುವುದಿಲ್ಲ ಎಂದು ಅವರು ತಿಳಿಸಿದರು.
ಅನಧಿಕೃತ ಕಟ್ಟಡ-ಸ್ಥಳಗಳ ಬಿ ಖಾತೆಯನ್ನು ಕಾವೇರಿ ತಂತ್ರಾAಶಕ್ಕೆ ಲಿಂಕ್ ಮಾಡುವ ಕಾರಣ ಸಾಲಸೌಲಭ್ಯಕ್ಕೆ ಅವಕಾಶ ಕಲ್ಪಿಸಿದರೂ ಸಾಲ ಸಿಗುವುದು ಬ್ಯಾಂಕ್ಗಳ ವ್ಯವಸ್ಥೆಗೆ ಬಿಟ್ಟದ್ದಾಗಿದೆ. ಆದರೆ ಮಾರಾಟ ಮಾಡಲು ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.
ಕಟ್ಕನ್ವರ್ಷನ್ ಗೂ ಬಿ ಖಾತೆ
ಕಟ್ ಕನ್ವರ್ಷನ್ ಗೂ ಬಿ ಖಾತೆ ನೀಡಲು ಅವಕಾಶ ಇದೆ. ಆದರೆ ಈ ಸ್ಥಳದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ಸಿಗಬೇಕಾದರೆ ಸಿಂಗಲ್ ಲೇಔಟ್ ಅನುಮೋದನೆಯಾಗಬೇಕು. ಇದಕ್ಕೆ ನಿಯಮಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಸಂಪನ್ಮೂಲ ಕ್ರೂಢೀಕರಣದ ಉದ್ದೇಶದಿಂದ ಈ ಕಾಯಿದೆ ತರಲಾಗಿದೆ. ಅಕ್ರಮವನ್ನು ಸಕ್ರಮೀಕರಿಸುವ ಹಿನ್ನಲೆಯಿಂದ ಅಲ್ಲ ಎಂದು ಅವರು ತಿಳಿಸಿದರು.
೨೦೧೩ರಲ್ಲಿ ಕಟ್ಟಡಗಳನ್ನು ಸಕ್ರಮ ಮಾಡುವ ಕಾಯ್ದಿಗೆ ಸುಪ್ರೀಂ ಕೋರ್ಟಿನ ತಡೆಯಾಜ್ಞೆಯಿದೆ. ದಲ್ಲಾಳಿಗಳು ಜನರಲ್ಲಿ ಗೊಂದಲ ಏರ್ಪಡಿಸುವ ಮೂಲಕ ತಪುö್ಪದಾರಿಗೆ ಎಳೆಯುತ್ತಿದ್ದಾರೆ. ಸಾರ್ವಜನಿಕರು ಪರವಾನಿಗೆ ಇಲ್ಲದೆ ಕಟ್ಟಡ ನಿರ್ಮಾಣ ಮಾಡಬಾರದು ಮತ್ತು ಮಂಜೂರಾದ ನಕ್ಷೆಯಂತೆ ಕಟ್ಟದೆ ಸೆಟ್ ಬ್ಯಾಕ್ ಉಲ್ಲಂಘಿಸಿ ಕಟ್ಟಡ ಮಾಡುವುದರಿಂದ ಮುಂದೆ ಸಮಸ್ಯೆ ನಿಶ್ಟಿತ ಎಂದು ಅವರು ತಿಳಿಸಿದರು.
ನಗರ ಸಭೆ ಸದಸ್ಯ ಮಹಮ್ಮದ್ ರಿಯಾಜ್, ನಾಮ ನಿರ್ದೇಶಿತ ಸದಸ್ಯ ರೋಶನ್ ರೈ ಬನ್ನೂರು, ಭೂ ನ್ಯಾಯ ಮಂಡಳಿ ಸದಸ್ಯ ಮಂಜುನಾಥ, ನಗರ ಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು ಉಪಸ್ಥಿತರಿದ್ದರು.
