
ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಮನೋಹರ್ ಸಿಂಗ್, ಗೋಬರ್ಸಿಂಗ್ ಚೌಹಾಣ್, ಕನ್ಹಯ್ಯಾಲಾಲ್ ಕಿರ್, ನಾಗು ಸಿಂಗ್, ಪವನ್ ಕಿರ್, ಧರ್ಮೇಂದ್ರ ಸಿಂಗ್, ಆಶಾ ಬಾಯಿ, ಮಧು ಬಾಯಿ, ಮಂಗು ಬಾಯಿ ಹಾಗೂ ರಾಮ್ ಕುನ್ವರ್ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಇಕೋ ಕಾರು ರತ್ಲಂ ಜಿಲ್ಲೆಯ ಖೋಜಂಖೇಡಾ/ಜೋಗಿಪಿಪ್ಲಿಯಾ ಗ್ರಾಮದಿಂದ ನೀಮುಚ್ನಲ್ಲಿರುವ ಅಂತರಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಲು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
13 ಮಂದಿಯನ್ನು ಹೊತ್ತು ವೇಗವಾಗಿ ಬಂದ ಇಕೋ ಕಾರು ಮೊದಲು ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದು ಬಾವಿಗೆ ಉರುಳಿದೆ. ಬಾವಿಗೆ ತಡೆಗೋಡೆ ಇರಲಿಲ್ಲ. ಹೀಗಾಗಿ ವಾಹನವು ನೇರವಾಗಿ ಅದರೊಳಗೆ ಬಿದ್ದಿದೆ. ಬಳಿಕ ಕಾರಿನಲ್ಲಿದ್ದ ಎಲ್ಪಿಜಿ ಅನಿಲ ಸೋರಿಕೆಯಾಗಿದೆ.
ಅನಿಲ ಸೋರಿಕೆಯಿಂದ ಕಾರಿನಲ್ಲಿದ್ದ ಪ್ರಯಾಣಿಕರು ಉಸಿರಾಟಕ್ಕಾಗಿ ಕಷ್ಟಪಡಲು ಪ್ರಾರಂಭಿಸಿದರು. ಇದನ್ನು ಗಮನಿಸಿದ ಸ್ಥಳೀಯ ವ್ಯಕ್ತಿ ಮನೋಹರ್ ಸಿಂಗ್ ಸಹಾಯ ಮಾಡಲು ಧಾವಿಸಿ ಬಂದು ಸಂತ್ರಸ್ತರನ್ನು ರಕ್ಷಿಸಲು ಬಾವಿಗೆ ಹಾರಿದ್ದಾರೆ. ಆದರೆ ಅನಿಲ ಸೋರಿಕೆಗೆ ಬಲಿಯಾಗಿ ಸಾವನ್ನಪ್ಪಿದಾಗ ಪರಿಸ್ಥಿತಿ ಇನ್ನಷ್ಟು ದುರಂತವಾಯಿತು.
ಇತ್ತ ತುರ್ತು ಕರೆ ಬಂದ ಕೂಡಲೇ ಸ್ಥಳೀಯ ಪೊಲೀಸರು ಮತ್ತು ಎಸ್ಡಿಒಪಿ, ಪೊಲೀಸ್ ಠಾಣೆ ಮುಖ್ಯಸ್ಥರು ಮತ್ತು ಎಸ್ಡಿಎಂ ಸೇರಿದಂತೆ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು, ಕ್ರೇನ್ ಸಹಾಯದಿಂದ ವಾಹನವನ್ನು ಬಾವಿಯಿಂದ ಮೇಲಕ್ಕೆತ್ತಲಾಯಿತು. ಸ್ಥಳೀಯ ಗ್ರಾಮಸ್ಥರು ಪ್ರಯಾಣಿಕರನ್ನು ಹೊರತೆಗೆಯಲು ಸಹಾಯ ಮಾಡಿದರು. ಮಹಿಳೆ, ಒಂದು ಚಿಕ್ಕ ಮಗು ಮತ್ತು ಒಬ್ಬ ಹದಿಹರೆಯದವರನ್ನು ಯಶಸ್ವಿಯಾಗಿ ರಕ್ಷಿಸಿ ಚಿಕಿತ್ಸೆಗಾಗಿ ಹತ್ತಿರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು.
ಇನ್ನು ಕಾರು ಡಿಕ್ಕಿ ಹೊಡೆದ ಮೋಟಾರ್ ಸೈಕಲ್ ಸವಾರ ಅಬಖೇಡಿ ಗ್ರಾಮದ ನಿವಾಸಿ ಗೋಬರ್ಸಿಂಗ್ ಚೌಹಾಣ್ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಸ್ಥಳೀಯ ಅಧಿಕಾರಿಗಳು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಅಪಘಾತದ ನಂತರ ನಿರಂತರ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.






