ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಅಮ್ಯೂಸ್ಮೆಂಟ್ ಸೇರಿದಂತೆ ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆಯುವ ಸ್ಥಳ ಈ ಬಾರಿ ದಾಖಲೆ ಮೊತ್ತವಾದ ರೂ.66 ಲಕ್ಷಕ್ಕೆ ಏಲಂ ಆಗಿದೆ. ಕಳೆದ ವರ್ಷ ಇದೇ ಸ್ಥಳ ರೂ.17.50 ಲಕ್ಷಕ್ಕೆ ಹರಾಜಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ಏಲಂ ಮೊತ್ತ ಗಣನೀಯ ಏರಿಕೆ ಕಂಡಿದೆ.
ಏಪ್ರಿಲ್ 2ರಂದು ಸಣ್ಣ ವ್ಯಾಪಾರಿಗಳಿಗಾಗಿ ಮೀಸಲಿಟ್ಟಿದ್ದ ಸ್ಥಳಗಳ ಹರಾಜು ಪ್ರಕ್ರಿಯೆ ನಡೆದಿತ್ತು.
ಅಮ್ಯೂಸ್ಮೆಂಟ್ ಸೇರಿದಂತೆ ದೊಡ್ಡ ಕಾರ್ಯಕ್ರಮಗಳಿಗೆ ಮೀಸಲಾದ ಸ್ಥಳದ ಹರಾಜು ಏಪ್ರಿಲ್ 3ರಂದು ನಡೆಯಿತು. ಹರಾಜಿನಲ್ಲಿ ಭಾಗವಹಿಸಲು ರೂ.50 ಸಾವಿರ ಇಎಂಡಿ (EMD) ಪಾವತಿಯನ್ನು ಕಡ್ಡಾಯಗೊಳಿಸಲಾಗಿತ್ತು. ಅನೇಕ ಬಿಡ್ಡುದಾರರು ಸ್ಪರ್ಧಾತ್ಮಕವಾಗಿ ಪಾಲ್ಗೊಂಡಿದ್ದು, ಅಂತಿಮವಾಗಿ ನವೀನ್ ಚಂದ್ರ ನ್ಯಾಕ್ (ಬೆದ್ರಾಳ) ಅವರು ರೂ.66 ಲಕ್ಷಕ್ಕೆ ಸ್ಥಳವನ್ನು ಪಡೆದುಕೊಂಡರು. ರಾಕೇಶ್ ನ್ಯಾಕ್ (ಪರ್ಲಡ್ಕ) ದ್ವಿತೀಯ ಉನ್ನತ ಬಿಡ್ಡುದಾರರಾಗಿದ್ದರು.
ಹರಾಜು ಪ್ರಕ್ರಿಯೆಯನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರ ನೇತೃತ್ವದಲ್ಲಿ ನಡೆಸಲಾಯಿತು. ಕಾರ್ಯನಿರ್ವಹಣಾಧಿಕಾರಿ ಕೆ.ವಿ. ನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಗಿರೀಶ್ ಕುಮಾರ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.














