ಪುತ್ತೂರು: ಮಹಾಲಿಂಗೇಶ್ವರ ಜಾತ್ರೋತ್ಸವದ ಪ್ರಯುಕ್ತ ದೇವರ ಪೇಟೆ ಸವರಿ ಸೇರಿದಂತೆ ಜನಸಂದಣಿ ಹೆಚ್ಚಾಗುವ ಕಾರ್ಯಕ್ರಮಗಳು ನಡೆಯಲಿರುವ ಹಿನ್ನೆಲೆಯಲ್ಲಿ ಮೆಸ್ಕಾಂ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸುರಕ್ಷತಾ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಏಪ್ರಿಲ್ 10ರಿಂದ ಆರಂಭವಾಗುವ ದೇವರ ಪೇಟೆ ಸವರಿಯ ಸಂದರ್ಭ ಯಾವುದೇ ಅನಾಹುತ ಸಂಭವಿಸದಂತೆ ಎಚ್‌ಟಿ (ಹೈ ಟೆನ್ಷನ್) ಹಾಗೂ ಎಲ್‌ಟಿ (ಲೋ ಟೆನ್ಷನ್) ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದ ಹಾಗೂ ತಂತಿಗಳಿಗೆ ತಗುಲಿ ವಾಲಿ ನಿಂತಿದ್ದ ಮರದ ಕೊಂಬೆಗಳು ಮತ್ತು ಗೆಲ್ಲುಗಳನ್ನು ಕಡಿದು ತೆರವುಗೊಳಿಸಲಾಯಿತು. ವಿದ್ಯುತ್ ತಂತಿಗಳ ಸಂಪರ್ಕದಿಂದ ಉಂಟಾಗಬಹುದಾದ ಅಪಾಯಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಹಾರಾಡಿ ರೈಲ್ವೆ ಬ್ರಿಡ್ಜ್ ಪಾಯಿಂಟ್‌ನಿಂದ ಬೋಳುವಾರು ಬಂಟರ ಭವನ, ಮಹಾಲಿಂಗೇಶ್ವರ ಐಟಿಐ, ಮಹಾಲಿಂಗೇಶ್ವರ ದೇವಸ್ಥಾನ ವರೆಗೆ ಹಾಗೂ ಬೋಳುವಾರು ಕರ್ಮಲ್ ಹೋಂಡಾ ಶೋರೂಮ್‌ವರೆಗೆ ವ್ಯಾಪಕವಾಗಿ ಮರದ ಕೊಂಬೆಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು.
ಸಹಾಯಕ ಇಂಜಿನಿಯರ್ ರಾಜೇಶ್ ಕೆ. ಅವರ ನೇತೃತ್ವದಲ್ಲಿ ಜೂನಿಯರ್ ಇಂಜಿನಿಯರ್ ದುರ್ಗಾ ಸಿಂಗ್, ದಿನೇಶ್ ಮೇಸ್ತ್ರಿ, ವಿಶ್ವನಾಥ್ ಮೇಸ್ತ್ರಿ ಹಾಗೂ ಪವರ್‌ಮೆನ್‌ಗಳಾದ ಸಂತೋಷ್ ಜಾದವ್, ಲಕ್ಷ್ಮಣ್, ಸಂತೋಷ್ ಮಲಿಯಪ್ಪ, ಗಂದಪ್ಪ ಶಿರೂರು, ಶಂಕರ ಗೌಡ ಪಾಟೀಲ್, ಬಸವರಾಜ್ ಸೇರಿದಂತೆ ಸಿಬ್ಬಂದಿ ಈ ಕಾರ್ಯದಲ್ಲಿ ಭಾಗವಹಿಸಿದ್ದರು.
ಜಾತ್ರೋತ್ಸವದ ಅವಧಿಯಲ್ಲಿ ನಿರಂತರ ವಿದ್ಯುತ್ ಸರಬರಾಜು ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಇಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

Join WhatsApp Group
error: Content is protected !!