ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡ ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಘನ ವಾಹನಗಳ ಸಂಚಾರಕ್ಕೆ ತಡೆ ಹಾಕಲಾಗಿದ್ದರೂ ಕೂಡ ಅದನ್ನು ಲೆಕ್ಕಿಸದೆ ವಾಹನವೊಂದನ್ನು ಚಾಲಕ ಬಲಾತ್ಕಾರವಾಗಿ ನುಗ್ಗಿಸಿ ಸಿಲುಕಿಕೊಂಡ ಘಟನೆ ಶನಿವಾರ (ಡಿ.21) ಬೆಳಗ್ಗೆ ನಡೆದಿದೆ.

ಚಾಲಕನ ನಿರ್ಲಕ್ಷ್ಯದಿಂದ ಸೇತುವೆಯಲ್ಲಿ ತಲೆ ಮೇಲೆಯಾಗಿ ನಿಂತುಕೊಂಡಿದೆ.

ಬಿ.ಸಿ.ರೋಡಿನಿಂದ ಗೂಡಿನಬಳಿಯಾಗಿ ಪಾಣೆಮಂಗಳೂರು ಕಡೆಗೆ ಸಂಚಾರಕ್ಕೆ ಯತ್ನಿಸಿದಾಗ ಅದು ಸೇತುವೆಯ ಮೇಲೆ ಘನ ವಾಹನ ಸಂಚಾರ ಮಾಡದಂತೆ ಹಾಕಲಾದ ಕಬ್ಬಿಣದ ತಡೆಬೇಲಿಯಲ್ಲಿ ಸಿಲುಕಿಕೊಂಡಿದೆ. ಶಂಭೂರು ಕಡೆಯ ವಾಹನ ಇದಾಗಿದ್ದು, ಮಸಾಲೆ ಪೌಡರ್ ಮಾರ್ಕೆಟಿಂಗ್ ಮಾಡುತ್ತಿತ್ತು.

ಘಟನೆಯಿಂದ ಚಾಲಕ ಯಾವುದೇ ಗಾಯವಿಲ್ಲದೆ ಅಪಾಯವಿಲ್ಲದೆ ಪಾರಾಗಿದ್ದಾನೆ.ಘಟನೆಯಿಂದ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನಾನುಕೂಲವಾಗಿದೆ. ಸಿಲುಕಿಕೊಂಡ ವಾಹನವನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದಾರೆ.

ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾದ ಸೇತುವೆಯ ಆಯುಷ್ಯ ಮುಗಿದಿದ್ದು, ಯಾವುದೇ ಘನ ವಾಹನಗಳ ಸಂಚಾರ ಮಾಡುವುದು ನಿಷಿದ್ಧ ಎಂದು ಸುಮಾರು ವರ್ಷಗಳ ಹಿಂದೆಯೇ ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದರೂ ಕೂಡ ಸ್ಥಳೀಯಾಡಳಿತದ ನಿರ್ಲಕ್ಷ್ಯತನಕ್ಕೆ ಒಳಗಾಗಿ ಕಳೆದ ವರ್ಷದವರೆಗೂ ಸೇತುವೆಯಲ್ಲಿ ಘನ ವಾಹನಗಳು ಬೇಕಾಬಿಟ್ಟಿಯಾಗಿ ಸಂಚಾರ ಮಾಡುತ್ತಿದ್ದವು. ಆದರೆ ಕಳೆದ ಮಳೆಗಾಲದಲ್ಲಿ ಸೇತುವೆಯ ಮೇಲೆ ಬಿರುಕು ಕಂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳೀಯಾಡಳಿತ ಕೂಡಲೇ ಸೇತುವೆಯ ಮೇಲೆ ಸಂಚಾರ ಮಾಡದಂತೆ ತಡೆಬೇಲಿ ನಿರ್ಮಾಣ ಮಾಡಿದೆ. ಆದರೆ ಒಂದು ಬಾರಿ ಅ ತಡೆಬೇಲಿಯನ್ನು ಅಕ್ರಮ ಮರಳು ಸಾಗಾಟ ಮಾಡುವ ಲಾರಿಗಳು ಹೊತ್ತು ಕೊಂಡು ಹೋಗಿದ್ದವು. ಮತ್ತೆ ಘನ ಗಾತ್ರದ ಕಬ್ಬಿಣದ ತಡೆಬೇಲಿ ಹಾಕಲಾಗಿತ್ತು‌. ಇದೀಗ ಆ ಬೇಲಿಗೆ ತಾಗಿ ವಾಹನ ಸಿಲುಕಿಕೊಂಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!