
ಆರು ಮಕ್ಕಳ ತಾಯಿಯೊಬ್ಬರು ಭಿಕ್ಷುಕನೊಂದಿಗೆ ಓಡಿಹೋಗಿರುವ ಘಟನೆ ಉತ್ತರಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದೆ.
ನನ್ನ ಪತ್ನಿ ಎರಡು ದಿನಗಳ ಹಿಂದೆ ಆಹಾರ ಪದಾರ್ಥಗಳು ಸೇರಿದಂತೆ ಇತರ ವಸ್ತುಗಳನ್ನು ತರುವುದಾಗಿ ಹೇಳಿ ಮಾರುಕಟ್ಟೆಗೆ ತೆರಳಿದ್ದರು. ಆದರೆ, ಆಕೆ ಮನೆಗೆ ಹಿಂತಿರುಗದೆ ಭಿಕ್ಷುಕನೊಂದಿಗೆ (ನನ್ಹೇ ಪಂಡಿತ್) ಓಡಿಹೋಗಿದ್ದಾರೆ’ ಎಂದು ಆರೋಪಿಸಿ ಲಂಕಾನ್ ಗ್ರಾಮದ ನಿವಾಸಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಈಚೆಗೆ ಮನೆಯಲ್ಲಿದ್ದ ಹಸುವೊಂದನ್ನು ಮಾರಾಟ ಮಾಡಿ ಬಂದಿದ್ದ ಹಣವನ್ನು ಜಮೀನು ಖರೀದಿಸಲೆಂದು ಕೂಡಿಟ್ಟಿದ್ದೆ. ಆದರೆ ನನ್ನ ಪತ್ನಿ, ಆ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಓಡಿಹೋಗಿದ್ದಾಳೆ’ ಎಂದು ಆತ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹರ್ದೋಯ್ ಜಿಲ್ಲೆಯ ಸಂಡಿ ಪ್ರದೇಶದ ನಿವಾಸಿಯಾಗಿರುವ ನನ್ಹೇ ಪಂಡಿತ್, ಮನೆ ಮನೆ ತಿರುಗಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ಇತ್ತೀಚೆಗಷ್ಟೇ ಭಿಕ್ಷೆ ಕೋರಿ ಮಹಿಳೆಯ ಮನೆಗೂ ಹೋಗಿದ್ದರು. ಮಹಿಳೆ ಆಗಾಗ್ಗೆ ಆತನಿಗೆ ತಿನ್ನಲು ಆಹಾರ ಅಥವಾ ಧಾನ್ಯಗಳನ್ನು ನೀಡುತ್ತಿದ್ದರು ಎಂದು ವರದಿಯಾಗಿದೆ.
ಹೀಗೆ ಪದೇ ಪದೇ ಭಿಕ್ಷೆ ಕೋರಿ ಮನೆ ಬಳಿ ಬರುತ್ತಿದ್ದ ಪಂಡಿತ್, ಮಹಿಳೆಯೊಂದಿಗೆ ಸಲುಗೆಯಿಂದ ಹಲವು ಗಂಟೆಗಳ ಕಾಲ ಮಾತನಾಡುತ್ತಿದ್ದರು. ಕ್ರಮೇಣ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.









