
ಪುತ್ತೂರು: ಟೀಕೆಗಳಿಗೆ ಅಭಿವೃದ್ಧಿಯ ಮೂಲಕ ಉತ್ತರ ನೀಡುವ ಕಾರ್ಯ ಮಾಡುತ್ತೇವೆ. ರೈತರ ಕಷ್ಟಗಳಿಗೆ ಸ್ಪಂದಿಸಿದ ಕಾರಣ ಪಕ್ಷಾತೀತವಾಗಿ ಎಲ್ಲರೂ ಸೇರಿರುವುದಕ್ಕೆ ಸಾಕ್ಷಿಯಾಗಿದೆ. 87ಲಕ್ಷ ನಷ್ಟದಲ್ಲಿದ್ದ ಸಹಕಾರಿ ಸಂಘ 1.29ಕೋಟಿ ಲಾಭದಲ್ಲಿ ಮುನ್ನಡೆಯುವಂತಾಗಿದೆ. 3.5ಕೋಟಿ ಪಿಗ್ಮಿ ಸಾಲದ ಮೂಲಕ ಬಡವರ ಕೈಹಿಡಿದಿದ್ದೇವೆ. ಸಹಕಾರಿ ಸಂಘದ ಹಣ ಉಳಿಸುವ ನಿಟ್ಟಿನಲ್ಲಿ ನಾಲ್ಕು ಸೀಟು ನೀಡಿದ್ದೇವೆ. 12ಸ್ಥಾನದಲ್ಲಿ ನಾಲ್ಕು ಸೀಟು ನೀಡುವುದಾಗಿ ಹೇಳಿದ್ದು, ಸಂಧಾನಕ್ಕೆ ಒಪ್ಪದೇ ಹೋದರೆ ಚುನಾವಣೆ ಎದುರಿಸಲು ಸಿದ್ದರಿದ್ದೇವೆ ಎಂದು ಬನ್ನೂರು ರೈತರ ಸೇವಾ ಸಹಕಾರಿ ಸಂಘ ಅದ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹೇಳಿದರು.
ಪಂಜಿಗುಡ್ಡೆಯಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಚುನಾವಣೆ ಜ.25ರಂದು ನಡೆಯುವ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಹಕಾರಿ ಸಂಘದ ಉಪಾಧ್ಯಕ್ಷ ರಾಜಶೇಖರ ಜೈನ್ ಮಾತನಾಡಿ ಸಂಧಾನ ನಡೆಸುವುದಕ್ಕೂ, ಸಂಗ್ರಾಮವನ್ನು ಎದುರಿಸುವುದಕ್ಕೂ ಸಿದ್ದರಿದ್ದೇವೆ. ನಷ್ಟಕ್ಕೆ ಹೋಗಿ ಮುಚ್ಚುವ ಹಂತಕ್ಕೆ ಹೋದ ಸಹಕಾರಿ, ವೈದ್ಯನಾಥ ವರದಿಯ ಮೂಲಕ ಸರ್ಕಾರದ ನೆರವಿನೊಂದಿಗೆ ಸಂಘ ಮೇಲೆದ್ದು ಲಾಭಾಂಶ ವಿತರಣೆಯ ಹಂತಕ್ಕೆ ಬಂದು ನಿಂತಿದೆ. 8 ಗ್ರಾಮವನ್ನು ಒಳಗೊಂಡಿರುವ ಕಾರಣ ಸ್ವಲ್ಪ ಕಷ್ಟವಾದರೂ, ಆಡಳಿತ ಮಂಡಳಿ ನಿಭಾಯಿಸಿಕೊಂಡು ಹೋಗುತ್ತಿದೆ. ಮುಂದೆಯೂ ಈಶ್ವರ ಭಟ್ ನೇತೃತ್ವದಲ್ಲಿ ಹೋಗುವುದಕ್ಕೆ ಎಲ್ಲರೂ ಸಿದ್ದರಿದ್ದೇವೆ ಎಂದು ತಿಳಿಸಿದರು.
ನಾಲ್ಕು ಸ್ಥಾನಕ್ಕಿಂತ ಹೆಚ್ಚಿನ ಬೇಡಿಕೆಯನ್ನಿಟ್ಟರೆ ಚುನಾವಣೆಗೆ ಹೋದರೆ 12ಸ್ಥಾನವನ್ನು ಜೈಯಿಸಬಹುದು ಎಂಬ ಅಭಿಪ್ರಾಯ ಕೇಳಿ ಬಂತು.
ಹಾರೆಕೆರೆ ವೆಂಕಟ್ರಮಣ ಭಟ್, ಮುರಳೀಧರ ರೈ ಮಠಂತಬೆಟ್ಟು, ಪ್ರಭಾಕರ್, ವಿಕ್ರಮ ಶೆಟ್ಟಿ ಅಂತರ, ಶಿವಪ್ರಸಾದ್, ಮೋನಪ್ಪ ಗೌಡ, ಡೆನ್ಸೀಸ್ ಮಸ್ಕರೇನಿಯಸ್, ಮೌರೀಸ್ ಕುಟೀನಾ ಮತ್ತಿತರರು ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಂಘದ ಮಾಜಿ ನಿರ್ದೇಶಕ ಗೋವಿಂದ ರಾಜ್ ಭಟ್, ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ವಿನಯ ಕುಮಾರ್, ಹಿರಿಯ ಸದಸ್ಯ ಸುಭಾಶ್ ನಾಯಕ್, ಪ್ರಮುಖರಾದ ಅಶ್ರಫ್ ಕಲ್ಲೇಗ, ಸುಬ್ರಾಯ ಗೌಡ, ಜಯಲಕ್ಷ್ಮಿ, ಶ್ರೀನಿವಾಸ ನಾಯ್ಕ, ಪ್ರಸಾದ್ ಕೌಶಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.








